ADVERTISEMENT

ಆಹಾರ ಭದ್ರತಾ ಮಸೂದೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 19:59 IST
Last Updated 1 ಜೂನ್ 2013, 19:59 IST

ನವದೆಹಲಿ (ಪಿಟಿಐ): ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬಹು ಮಹತ್ವಾಕಾಂಕ್ಷೆಯ ಆಹಾರ ಭದ್ರತಾ ಮಸೂದೆಗೆ ಅಂಗೀಕಾರ ಪಡೆದುಕೊಳ್ಳಲು ಶತ ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್, ಈ ಬಗ್ಗೆ ಒಮ್ಮತ ಮೂಡಿಸಲು ಯುಪಿಎ ಅಂಗಪಕ್ಷಗಳ ಮತ್ತು ಪ್ರತಿಪಕ್ಷಗಳ ಮನವೊಲಿಸುವ ಯತ್ನಕ್ಕೆ ಕೈಹಾಕಿದೆ.

ಈ ಸಂಬಂಧ ಸಂಸತ್ ವಿಶೇಷ ಅಧಿವೇಶನ ಕರೆಯಲು ಚಿಂತಿಸಿರುವ ಕಾಂಗ್ರೆಸ್, ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲು ಸೋಮವಾರ ಯುಪಿಎ ಮೈತ್ರಿಕೂಟದ ಸಮನ್ವಯ ಸಮಿತಿ ಸಭೆ ಕರೆದಿದೆ. ಜೊತೆಗೆ ಇದೇ 7ರಂದು ಸರ್ವಪಕ್ಷಗಳ ಸಭೆ ಕರೆಯುವ ಕುರಿತೂ ಆಲೋಚಿಸಿದೆ.

ಆಹಾರ ಭದ್ರತಾ ಮಸೂದೆ ಸಂಬಂಧ ಒಮ್ಮತ ಮೂಡಿಸುವ ಸಲುವಾಗಿ ಸಂಸದೀಯ ವ್ಯವಹಾರಗಳ ಸಚಿವ ಕಮಲ್‌ನಾಥ್ ಅವರಿಗೆ ರಾಜಕೀಯ ಪಕ್ಷಗಳ ಜೊತೆ ಮಾತುಕತೆ ನಡೆಸುವ ಜವಾಬ್ದಾರಿ ವಹಿಸಲಾಗಿದೆ. ಈ ಮಾತುಕತೆ ಫಲಪ್ರದವಾದರೆ ವಿಶೇಷ ಅಧಿವೇಶನ ಕರೆಯಲು ಚಿಂತಿಸಲಾಗಿದೆ. ವಿಫಲವಾದರೆ ಸುಗ್ರೀವಾಜ್ಞೆ ತರುವ ಮೂಲಕ ಆಹಾರ ಭದ್ರತಾ ಯೋಜನೆಯನ್ನು ಅನುಷ್ಠಾನ ಮಾಡಲು ಆಲೋಚಿಸಲಾಗಿದೆ. 

ಪಕ್ಷದ ಮೂಲಗಳ ಪ್ರಕಾರ ಜುಲೈ 1ರಿಂದ 5ರವರೆಗೆ ವಿಶೇಷ ಅಧಿವೇಶನಕ್ಕೆ ದಿನಾಂಕ ಗೊತ್ತು ಮಾಡಲಾಗಿದೆ. ಆದರೆ, ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು  ಸರ್ಕಾರಿ ಮೂಲಗಳು ಹೇಳಿವೆ.

ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಪಕ್ಷದ ವರಿಷ್ಠರ ಸಭೆಯಲ್ಲಿ ಆಹಾರ ಭದ್ರತಾ ಮಸೂದೆ, ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ, ಮಾವೊವಾದಿಗಳ ದಾಳಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮೂರು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.