ADVERTISEMENT

ಇಂದು ಆಸ್ಟ್ರೇಲಿಯಾಕ್ಕೆ ಉಪರಾಷ್ಟ್ರಪತಿ ಅನ್ಸಾರಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ನವದೆಹಲಿ (ಐಎಎನ್‌ಎಸ್): ಕಾಮನ್‌ವೆಲ್ತ್ ರಾಷ್ಟ್ರಗಳ ಸರ್ಕಾರದ ಮುಖ್ಯಸ್ಥರ ಸಭೆಯಲ್ಲಿ ಭಾಗವಹಿಸಲು ಆಸ್ಟ್ರೇಲಿಯಾಕ್ಕೆ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ತೆರಳುತ್ತಿದ್ದು, ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕಾರ್ಯಕ್ರಮಗಳ ಒತ್ತಡ ಇರುವುದರಿಂದ ಇದರಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಭಾರತದೊಂದಿಗೆ ಬಲವಾದ ಬಾಂಧವ್ಯವನ್ನು ಬೆಳೆಸಲು ಆಸ್ಟ್ರೇಲಿಯಾ ಸರ್ಕಾರ ವಿಫಲವಾಗಿರುವುದೇ ಈ ಸಭೆಗೆ ಸಿಂಗ್ ಆಗಮಿಸದಿರಲು ಕಾರಣವೆಂದು ಅಲ್ಲಿನ ಕೆಲವು ಮಾಧ್ಯಮಗಳು ವರದಿ ಮಾಡಿರುವ ಬಗ್ಗೆ ಸುದ್ದಿಗಾರರು ಮಂಗಳವಾರ ಇಲ್ಲಿ ಪ್ರಶ್ನಿಸಿದಾಗ, ಪ್ರತಿಕ್ರಿಯಿಸಿದ ವಿದೇಶಾಂಗ ಕಾರ್ಯದರ್ಶಿ ರಂಜನ್ ಮಥಾಯ್, `ಈ ವರದಿ ಸರಿಯಲ್ಲ. ಇಂತಹ ಭಾವನೆ ಪ್ರಕಟವಾಗಿರುವುದು ದುರದೃಷ್ಟಕರ~ ಎಂದರು.

`ಪ್ರಧಾನಿಯವರು ನವೆಂಬರ್‌ನಲ್ಲಿ ಮೂರು ಬಹುಪಕ್ಷೀಯ ಸಾಗರೋತ್ತರ ಶೃಂಗಸಭೆಗಳು ಮತ್ತು ಇತರ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ~ ಎಂದು ತಿಳಿಸಿದ ಅವರು, `ನಮ್ಮ ದೇಶದ ವ್ಯವಸ್ಥೆಯಲ್ಲಿ ಉಪರಾಷ್ಟ್ರಪತಿಗೆ ಉನ್ನತ ಮತ್ತು ಮಹತ್ವದ ಸ್ಥಾನವಿದ್ದು, ಅಗ್ರಪಂಕ್ತಿಯ ಅಧಿಕಾರ ಶ್ರೇಣಿಯಲ್ಲಿ ಎರಡನೇ ಸ್ಥಾನವನ್ನು ಹೊಂದಿ, ಶಿಷ್ಟಾಚಾರ ಪಾಲನೆಯಲ್ಲಿ ಪ್ರಧಾನಿಗಿಂತಲೂ ಮೇಲ್ಮಟ್ಟದ ಗೌರವವನ್ನು ಹೊಂದಿದ್ದಾರೆ~ ಎಂದು ಉತ್ತರಿಸಿದರು. ಜೊತೆಗೆ `ಅನ್ಸಾರಿಯವರಿಗೆ ಅಪಾರ ಅಂತರರಾಷ್ಟ್ರೀಯ ಸಂಬಂಧಗಳ ಅನಭವವೂ ಇದೆ~ ಎಂದೂ ಹೇಳಿದರು.

ಅನ್ಸಾರಿಯವರು ಹಿರಿಯ ಅಧಿಕಾರಿಗಳು ಮತ್ತು ಅನೇಕ ಮಾಧ್ಯಮ ಪ್ರತಿನಿಧಿಗಳ ನಿಯೋಗದೊಡನೆ ಗುರುವಾರ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಅವರು ಆಸ್ಟ್ರೇಲಿಯಾ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಅವರೊಡನೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ (ಎನ್‌ಪಿಟಿ) ಸಹಿ ಹಾಕದ ರಾಷ್ಟ್ರಗಳಿಗೆ ಯುರೇನಿಯಂ ರಫ್ತು ನಿಷೇಧಿಸಿರುವ ಆಸ್ಟ್ರೇಲಿಯಾ ಸರ್ಕಾರದ ನೀತಿಯನ್ನು ಬದಲಿಸಿ, ಭಾರತಕ್ಕೆ ಯುರೇನಿಯಂ ಪೂರೈಕೆ ಮಾಡುವಂತೆಯೂ ನಿಯೋಗ ಕೋರುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.