ಪಕ್ಷಿ ಪ್ರಪಂಚದಲ್ಲಿ ಅಳಿವಿನ ಅಂಚಿನಲ್ಲಿರುವ ಪಕ್ಷಿ ಗುಬ್ಬಚ್ಚಿ. ಇದು ಮನುಷ್ಯರ ಮಧ್ಯೆ ಬದುಕು ಕಟ್ಟಿಕೊಂಡಿರುವ ಪುಟ್ಟ ಹಕ್ಕಿ. ಊಹಿಸಲಾಗದ ನಗರೀಕರಣ, ಎಲ್ಲೆ ಮೀರಿದ ಮಾನವರ ಬದುಕಿನ ಶೈಲಿ ಗುಬ್ಬಚ್ಚಿಗಳನ್ನು ಅವಸಾನಕ್ಕೆ ತಳ್ಳಿದೆ.
ಪ್ರತಿ ವರ್ಷ ಮಾರ್ಚ್ 20ರಂದು ವಿಶ್ಚ ಗುಬ್ಬಚ್ಚಿಗಳ ದಿನ ಎಂದು ಆಚರಿಸಲಾಗುತ್ತಿದೆ. ನೇಚರ್ ಫಾರ್ ಸೊಸೈಟಿ ಫಾರ್ ಇಂಡಿಯಾ(ಎನ್ಎಫ್ಎಸ್ಐ) ಸಂಸ್ಥೆಯ ನಿರ್ಮಾತೃ ಮೊಹಮ್ಮದ್ ದಿಲ್ವಾರ್ ಅವರು 2010ರಲ್ಲಿ ಗುಬ್ಬಚ್ಚಿಗಳ ದಿನವನ್ನು ಜಗತ್ತಿಗೆ ಪರಿಚಯಿಸಿದರು ಅಥವಾ ರೂಪಿಸಿದರು.
ಪ್ರತಿವರ್ಷ ಎನ್ಎಫ್ಎಸ್ಐ ವಿಶ್ವ ಗುಬ್ಬಚ್ಚಿಗಳ ದಿನವನ್ನು ಪ್ರಪಂಚದಾದ್ಯಂತ ಒಟ್ಟು 50 ರಾಷ್ಟ್ರಗಳಲ್ಲಿ ಆಚರಿಸುತ್ತಿದೆ.
ಮಾನವನೊಂದಿಗೆ ಗುಬ್ಬಚ್ಚಿಗಳ ಅವಿನಾಭಾವ:
ಮಾನವರಲ್ಲಿ ಬೇರೆಲ್ಲಾ ಪಕ್ಷಿಗಳಿಗಿಂತ ಗುಬ್ಬಚ್ಚಿಗೆ ವಿಶೇಷ ಸ್ಥಾನ. ಯಾವಾಗಲೂ ಮನುಷ್ಯರ ನಡುವೆ ಚಿಲಿಪಿಲಿ ಗುಟ್ಟುತ್ತಾ ಬದುಕುವ ಗುಬ್ಬಚ್ಚಿಗೆ ಮನುಷ್ಯರೇ ಮುಳುವಾಗಿದ್ದಾರೆ. ಅವರ ಜೀವನ ಕ್ರಮಗಳು ಅವುಗಳನ್ನು ಉಸಿರುಗಟ್ಟಿಸುತ್ತಿವೆ.
ಇಂದಿನ ಪೀಳಿಗೆಯವರು, ನೆಮ್ಮದಿಯ ಗಣಿಯಾಗಿರುವ ಪ್ರಕೃತಿ ಸೌಂದರ್ಯವನ್ನು ಮೂಲೆಗುಂಪು ಮಾಡಿ ತಾಂತ್ರಿಕ ಬದುಕಿಗೆ ಜೋತುಬಿದ್ದಿದ್ದಾರೆ. ಅಪಾಯಕಾರಿ ಜೀವನ ಶೈಲಿ ಅಳವಡಿಸಿಕೊಂಡು ಬದುಕುತ್ತಿದ್ದಾರೆ. ಇದರಿಂದ ಮನುಷ್ಯ ಹಾಗೂ ಗುಬ್ಬಚ್ಚಿಗಳ ನಡುವೆ ಇರುವ ಭಾವಯಾನ ತುಂಡಾಗಿ ಹೋಗಿದೆ. ಇದು ಕೂಡ ಗುಬ್ಬಚ್ಚಿಗಳ ಅವಸಾನಕ್ಕೆ ಕಾರಣ ಎನ್ನುತ್ತಾರೆ ಮೊಹಮ್ಮದ್ ದಿಲ್ವಾರ್.
ಇನ್ನಿತರ ಅಂಶಗಳು:
ಈ ಮೇಲಿನ ಅಂಶಗಳ ಜೊತೆಗೆ ಕೃಷಿಯಲ್ಲಿ ಕೀಟನಾಶಕಗಳ ಬಳಕೆ, ಪ್ಯಾಕೇಟ್ ಆಹಾರ, ಬದಲಾದ ಜೀವನಶೈಲಿ ಇವೆಲ್ಲವೂ ಗುಬ್ಬಚ್ಚಿಗಳಿಗೆ ಆಹಾರದ ಕೊರತೆ ಎದುರಾಗುವಂತೆ ಮಾಡಿದ್ದಲ್ಲದೇ ಅವುಗಳ ಸಾವಿಗೆ ಕಾರಣವಾಗಿದೆ ಎಂಬುದು ದಿಲ್ವಾರ್ ಅಭಿಪ್ರಾಯಪಡುತ್ತಾರೆ.
ವಾಸದ ಕೊರತೆ:
ಫ್ಯಾಷನ್ ಜೀವನಶೈಲಿಯಲ್ಲಿ ಮುಳುಗಿರುವ ಮಾನವರು ತಮ್ಮ ವಾಸಸ್ಥಾನವು ಆಧುನಿಕತೆಗೆ ಹೊಂದಿಕೊಂಡಿರಬೇಕೆಂದು ಬಯಸುವುದು ಸಹಜ. ಇದು ಕೂಡ ಗುಬ್ಬಚ್ಚಿಗಳ ಜೀವಕ್ಕೆ ಕುತ್ತು ತಂದಿದೆ.
ಗುಬ್ಬಚ್ಚಿಗಳಿಗೆ ಬೇಕಿರುವುದು ಅಂಗೈ ಅಗಲದಷ್ಟು ಗೂಡು. ನಮ್ಮ ಹಿಂದಿನ ಹಿರಿಯರ ಮನೆಗಳು ಹೆಚ್ಚಿನದಾಗಿ ಹಂಚಿನ , ಹುಲ್ಲಿನ ಮನೆಗಳು. ಇವುಗಳು ಗುಬ್ಬಚ್ಚಿಗಳಿಗೆ ಹೇಳಿ ಮಾಡಿಸಿದ ವಾಸಸ್ಥಾನವಾಗಿದ್ದವು. ಆದರೆ ಇಂದಿನ ಮನೆಗಳ ನಿರ್ಮಾಣವೂ ಸಂಪೂರ್ಣವಾಗಿ ಆಧುನಿಕರಣಕ್ಕೆ ಒಳಪಟ್ಟಿದೆ.
ಇಂತಹ ಮನೆಗಳಲ್ಲಿ ಗುಬ್ಬಚ್ಚಿಗಳು ಗೂಡಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗೂಡಿಲ್ಲದೇ ಗುಬ್ಬಚ್ಚಿಗಳು ಬಿಸಿಲು, ಮಳೆ , ಗಾಳಿಗೆ ತತ್ತರಿಸುತ್ತಿದ್ದು ಅಳಿವಿನಂಚಿಗೆ ಸಾಗುತ್ತಿವೆ.
ಎನ್ಎಫ್ಎಸ್ಐನ ಜಾಗೃತಿ ಅಭಿಯಾನ :
ಎನ್ಎಫ್ಎಸ್ಐ ಇದು ಸ್ಥಾಪನೆಯಾಗಿದ್ದು 2005ರಲ್ಲಿ. ಗುಬ್ಬಚ್ಚಿಗಳು ಅವಸಾನಕ್ಕೆ ಹೋಗುತ್ತಿರುವುದನ್ನರಿತ ಎನ್ಎಫ್ಎಸ್ಐ ಇವುಗಳ ಬಗ್ಗೆ ಅರಿವು ಮೂಡಿಸಲು ಹಾಗೂ ವಾಸಸ್ಥಾನದ ಸಮಸ್ಯೆ ನಿವಾರಿಸಲು ಗೂಡುಗಳನ್ನು ಹಂಚಿಕೆ ಮಾಡಿತ್ತು.
ಅವರವರ ಮನೆಯಲ್ಲಿ ಮರದ ಗೂಡುಗಳನ್ನು ನೇತುಹಾಕಲು ಹಾಗೂ ಸಣ್ಣ ಬಟ್ಟಲಿನಲ್ಲಿ ನೀರು ಇಡಲು ಸಲಹೆ ನೀಡಿತ್ತು.
ಕೃಪೆ : ದಿ ಹಿಂದೂ