ಭುವನೇಶ್ವರ (ಐಎಎನ್ಎಸ್): ಒತ್ತೆಯಾಳಾಗಿರಿಸಿಕೊಂಡಿರುವ ಇಟಲಿ ದೇಶದ ಪ್ರಜೆಯನ್ನು ಬಿಡುಗಡೆ ಮಾಡಲು ನಕ್ಸಲರು ಶುಕ್ರವಾರ ನಿರಾಕರಿಸಿದ್ದು, ಬಿಕ್ಕಟ್ಟು ಬಿಗಡಾಯಿಸಿದೆ.
27 ಮಂದಿ ಮಾವೋವಾದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲು ಸರ್ಕಾರ ಒಪ್ಪಿಗೆ ನೀಡಿದಾಗ್ಯೂ ಸಹ ನಕ್ಸಲರು ಇಟಲಿ ಪ್ರಜೆಯನ್ನು ಬಿಡುಗಡೆ ಮಾಡಲು ನಿರಾಕರಿಸಿದರು.
ನಕ್ಸಲರ ಒಂದು ಗುಂಪಿನ ನಾಯಕ ಸವ್ಯಸಾಚಿಪಾಂಡ ತನ್ನ ಧ್ವನಿ ಮುದ್ರಿತ ಸಂದೇಶವನ್ನು ಕೆಲವು ಟಿವಿ ವಾಹಿನಿಗಳಿಗೆ ಕಳುಹಿಸಿದ್ದು, ಅದರಲ್ಲಿ ಆತ ಸರ್ಕಾರ ಯಾವುದೇ ಒಪ್ಪಂದಕ್ಕೂ ಸಹಿ ಹಾಕಿಲ್ಲ ಹೀಗಾಗಿ ಇಟಲಿ ಪ್ರಜೆಯನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ.
ಇದಕ್ಕೂ ಮುನ್ನ ಶುಕ್ರವಾರ ಬೆಳಿಗ್ಗೆ ಮಾವೋವಾದಿಗಳ ಪರವಾಗಿ ದಂಡಪಾಣಿ ಮೊಹಾಂತಿ ಹಾಗೂ ಬಿ.ಡಿ. ಶರ್ಮಾ ಅವರು ಸರ್ಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಬಂಧನದಲ್ಲಿರುವ ಮಾವೋವಾದಿಗಳನ್ನು ಹೇಗೆ ಬಿಡುಗಡೆ ಮಾಡುತ್ತೀರಿ ಎಂದು ಕೇಳಿದರು. ಅದಕ್ಕೆ ಅಧಿಕಾರಿಗಳು ಸರ್ಕಾರದೊಂದಿಗೆ ಚರ್ಚಿಸಿ ತಿಳಿಸುವುದಾಗಿ ಹೇಳಿದರು ಎಂದು ಮೊಹಂತಿ ಸುದ್ದಿಗಾರರಿಗೆ ತಿಳಿಸಿದರು.
 ಇದೇ ವೇಳೆ ಅವರು ಕೇವಲ ಮುಖ್ಯಮಂತ್ರಿಗಳು 27 ಮಂದಿಯನ್ನು ಬಿಡುಗಡೆ ಮಾಡುವುದಾಗಿ ಮಾಡಿದ ಘೋಷಣೆಗೆ ನಕ್ಸಲರು ಪ್ರತಿಕ್ರಿಯಿಸಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.