ADVERTISEMENT

ಇಟಲಿ ಯೋಧರ ವಿರುದ್ಧ ಕೊಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 19:59 IST
Last Updated 5 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ):  ಕೇರಳ ಕರಾವಳಿಯಲ್ಲಿ ಇಬ್ಬರು ಭಾರತೀಯ ಮೀನುಗಾರರ ಹತ್ಯೆ ಪ್ರಕರಣದ ಆರೋಪಿಗಳಾದ ಇಟಲಿ ಯೋಧರ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೊಲೆ ಪ್ರಕರಣವನ್ನು ದಾಖಲು ಮಾಡಿದೆ.

ಗುರುವಾರ ಗೃಹ ಸಚಿವಾಲಯ ಪ್ರಕರಣದ ತನಿಖೆಯನ್ನು ಎನ್‌ಐಎಗೆ  ವಹಿಸಿತ್ತು. ವಿಶೇಷ ಕೋರ್ಟ್‌ಗೆ ಎನ್‌ಐಎ ಶುಕ್ರವಾರ ಪ್ರಥಮ ಮಾಹಿತಿ ವರದಿ ಸಲ್ಲಿಸಿದೆ.

ಆರೋಪ ಹೊತ್ತಿರುವ ಇಟಲಿ ಯೋಧರಾದ ಮಾಸಿಮಿಲಿಯಾನೊ ಲಾಟ್ಟೊರೆ ಮತ್ತು ಸಾಲ್ವಟೊರೆ ಗಿರೊನಿ ವಿರುದ್ಧ ಭಾರತೀಯ ದಂಡ ಸಂಹಿತೆಯ 302(ಕೊಲೆ) 307 (ಕೊಲೆ ಯತ್ನ) 427 (ಕೀಡಿಗೇಡಿತನ)  ಕಲಂ ಅಡಿಯಲ್ಲಿ  ಈ ಪ್ರಕರಣದ ತನಿಖೆ ಕೇರಳ ಸರ್ಕಾರದ ವ್ಯಾಪ್ತಿಗೆ ಮೀರಿದ್ದು ಎಂದು ಸುಪ್ರೀಂಕೋರ್ಟ್ ಹೇಳಿದ ಮೇರೆಗೆ ಕೇಂದ್ರ ಗೃಹ ಸಚಿವಾಲಯ ಇದನ್ನು ಎನ್‌ಐಎಗೆ ತನಿಖೆಯನ್ನು ವಹಿಸಿತ್ತು.

ಖುರ್ಷಿದ್-ಇಟಲಿ ಪ್ರಧಾನಿ ಸಂಭಾಷಣೆ
ನವದೆಹಲಿ (ಐಎಎನ್‌ಎಸ್):
  ಕೇರಳದ ಇಬ್ಬರು ಮೀನುಗಾರರನ್ನು ಹತ್ಯೆ ಮಾಡಿದ ಆರೋಪದಡಿ ವಿಚಾರಣೆ ಎದುರಿಸುತ್ತಿರುವ ಇಟಲಿಯ ಇಬ್ಬರು ನೌಕಾ ಯೋಧರ ಕುರಿತಾಗಿ ಆ ದೇಶದ ಹಂಗಾಮಿ ಪ್ರಧಾನಿ ಮೆರಿಯೊ ಮೊಂಟಿ ಶುಕ್ರವಾರ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಅವರೊಂದಿಗೆ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಟಲಿ ವಿದೇಶಾಂಗ ವ್ಯವಹಾರಗಳ ಸಚಿವ ಗಿಲಿಯೊ ತೆರ್ಜಿ ಕಳೆದ ವಾರ ರಾಜೀನಾಮೆ ಸಲ್ಲಿಸಿದ ನಂತರ ಹೆಚ್ಚುವರಿಯಾಗಿ ಮೊಂಟಿ ಈ ಖಾತೆಯನ್ನೂ ನಿರ್ವಹಿಸುತ್ತಿದ್ದಾರೆ.

ಇಟಲಿಯ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಸ್ಟಾಫಾನ್ ದಿ ಮಿಸ್ತುರಾ ಶುಕ್ರವಾರ ಇಲ್ಲಿ ಖುರ್ಷಿದ್ ಅವರನ್ನು ಭೇಟಿ ಮಾಡಿದ ನಂತರ ಮೊಂಟಿ ಮಾತುಕತೆ ನಡೆಸಿದರು. ಖುರ್ಷಿದ್ ಅವರನ್ನು ಭೇಟಿ ಮಾಡಿದ ಮಿಸ್ತುರಾ, ಯೋಧರ ವಿಚಾರಣೆ ಕುರಿತು ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT