ನವದೆಹಲಿ(ಪಿಟಿಐ): ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮಂಗಳವಾರ ಹೇಳಿದೆ.
ವಾಯುವ್ಯ ಭಾರತದ ರಾಜ್ಯಗಳಾದ ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾ ಖಂಡ, ಜಮ್ಮು- ಕಾಶ್ಮೀರ, ಪಂಜಾಬ್, ಗುಜರಾತ್, ಪೂರ್ವ ಉತ್ತರ ಪ್ರದೇಶ ಹಾಗೂ ದೆಹಲಿಯಲ್ಲಿ ಈ ಬಾರಿ ಮಳೆ ಅಭಾವ ತಲೆದೋರುವ ಸಾಧ್ಯತೆ ಇದೆ.
ಈ ರಾಜ್ಯಗಳಲ್ಲಿ ಪ್ರಸಕ್ತ ಮುಂಗಾರಿನಲ್ಲಿ ಸರಾಸರಿ ಶೇ 93ರಷ್ಟು ಮಳೆ ನಿರೀಕ್ಷಿಸಲಾಗಿತ್ತು. ಆದರೆ, ಇದು ಶೇ 88ಕ್ಕೆ ತಗ್ಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ನೋಟ ನೀಡಿದೆ ಎಂದು ಕೇಂದ್ರ ಭೂ ವಿಜ್ಞಾನ ಇಲಾಖೆ ಸಚಿವ ಹರ್ಷ ವರ್ಧನ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹವಾಮಾನ ಇಲಾಖೆಯು ಪ್ರಸಕ್ತ ಮುಂಗಾರಿನಲ್ಲಿ ಸರಾಸರಿ ಶೇ 93ರಷ್ಟು ಮಳೆ ಬೀಳಲಿದೆ ಎಂದು ಏಪ್ರಿಲ್ ನಲ್ಲಿ ಹೇಳಿತ್ತು. ಆದರೆ, ಪರಿಷ್ಕೃತ ವರದಿಯ ಪ್ರಕಾರ ಇದು ಸರಾಸರಿ ಶೇ 5ರಷ್ಟು ಕಡಿಮೆಯಾಗಲಿದೆ ಎಂದಿದೆ.
‘ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗದಿರಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುವೆ’ ಎಂದು ಹರ್ಷ ವರ್ಧನ್ ಹೇಳಿದ್ದಾರೆ.
5ಕ್ಕೆ ಮುಂಗಾರು ಪ್ರವೇಶ: ಪ್ರಸಕ್ತ ಸಾಲಿನ ಮುಂಗಾರು ಮಳೆ ಜೂನ್ 5ರಂದು ಕೇರಳಕ್ಕೆ ಪ್ರವೇಶಿಸಲಿದೆಯೆಂದು ಹವಾಮಾನ ಇಲಾಖೆ ತಿಳಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಈ ಮೊದಲು ಮೇ 30 ಅಥವಾ ಜೂನ್ 1ರಂದು ಮುಂಗಾರು ಕೇರಳಕ್ಕೆ ಪ್ರವೇಶ ಪಡೆಯಲಿದೆ. ಮೂರ್ನಾಲ್ಕು ದಿನ ಆಚೀಚೆ ಆಗಬಹುದು ಎಂದು ಇಲಾಖೆ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.