ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸರ್ಕಾರಿ ಸ್ವಾಮ್ಯದ ಬಸ್, ಶೌಚಾಲಯ ಹಾಗೂ ಕಚೇರಿಗಳಿಗೆ ಕೇಸರಿ ಬಣ್ಣ ಬಳಿಯಲಾಗಿತ್ತು. ಈಗ ಅವುಗಳ ಸಾಲಿಗೆ ಟೋಲ್ ಪ್ಲಾಜಾಗಳೂ ಸೇರಿವೆ!
ಮುಜಾಫ್ಫರ್ನಗರ–ಸಹರಾನ್ಪುರ ಹೆದ್ದಾರಿಯಲ್ಲಿನ ಹೊಸ ಟೋಲ್ ಪ್ಲಾಜಾಗೆ ಕೇಸರಿ ಬಣ್ಣ ಬಳಿಯಲಾಗಿದೆ. ಕೆಲವು ದಿನಗಳ ಹಿಂದೆ ಪ್ರಾಯೋಗಿಕವಾಗಿ ಇದು
ಕಾರ್ಯಾರಂಭ ಮಾಡಿದೆ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ, ‘ವಾಸ್ತು ಶಿಲ್ಪಿಗಳು ಈ ರೀತಿ ವಿನ್ಯಾಸಗೊಳಿಸಿದ್ದಾರೆ. ಕೇಸರಿ ಬಣ್ಣವೂ ವಿನ್ಯಾಸದ ಭಾಗವೇ’ ಎಂದು ಉತ್ತರಿಸುತ್ತಾರೆ. ಕೇಸರಿ ಬಣ್ಣ ಬಳಿಯಲು ಸರ್ಕಾರ ನಿರ್ದೇಶನ ನೀಡಿದೆ ಎಂಬುದನ್ನು ಅಧಿಕಾರಿಗಳು ಅಲ್ಲಗಳೆಯುತ್ತಾರೆ.
ಉತ್ತರ ಪ್ರದೇಶ ಸರ್ಕಾರವು ‘ಹಜ್ ಭವನ’ಕ್ಕೆ ಕೇಸರಿ ಬಣ್ಣ ಬಳಿದಿದ್ದು ವಿವಾದ ಸೃಷ್ಟಿಸಿತ್ತು. ‘ಧರ್ಮದ ವಿಷಯದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ’ ಎಂದು ಮುಸ್ಲಿಂ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರ, ಸರ್ಕಾರ ಹಜ್ ಭವನಕ್ಕೆ ಬಿಳಿ ಬಣ್ಣ ಬಳಿಸಿತ್ತು.
ಮುಂದಿನ ಶೈಕ್ಷಣಿಕ ವರ್ಷದಿಂದ ಎಂಟನೇ ತರಗತಿಯವರೆಗಿನ ಪಠ್ಯಪುಸ್ತಕಗಳ ಮುಖಪುಟವನ್ನು ಕೇಸರಿ ಬಣ್ಣದಲ್ಲಿ ಮುದ್ರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈಗಾಗಲೇ, ಪ್ರಾಥಮಿಕ ಶಾಲೆಯ ಮಕ್ಕಳ ಶಾಲಾ ಬ್ಯಾಗ್ಗಳು ಕೇಸರಿಮಯವಾಗಿವೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆಡಳಿತ ಕಚೇರಿಯು ಈಗಾಗಲೇ ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿದೆ. ಅವರು ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯ ಸರ್ಕಾರದ ಎಲ್ಲ ಕಾರ್ಯಕ್ರಮಗಳು ಮತ್ತು ಯೋಜನೆಗಳಲ್ಲಿ ಕೇಸರಿ ಬಣ್ಣ ಕಾಣಿಸಲು ಪ್ರಯತ್ನಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.