ADVERTISEMENT

ಉತ್ತರ ಪ್ರದೇಶ: ರೈತನನ್ನು ಕೊಂದ ಎಸ್‌ಟಿಎಫ್

​ಪ್ರಜಾವಾಣಿ ವಾರ್ತೆ
Published 8 ಜನವರಿ 2012, 19:30 IST
Last Updated 8 ಜನವರಿ 2012, 19:30 IST

ಬಾದ್ವಾನ್ (ಪಿಟಿಐ):  ರೌಡಿಗಳ ಪಟ್ಟಿಯಲ್ಲಿರುವ ಹೆಸರಿರುವ ವ್ಯಕ್ತಿ ಎಂದು ತಪ್ಪಾಗಿ ಭಾವಿಸಿ ರೈತನೊಬ್ಬನನ್ನು ಉತ್ತರ ಪ್ರದೇಶ ವಿಶೇಷ ಕಾರ್ಯ ಪಡೆ (ಎಸ್‌ಟಿಎಫ್) ಹತ್ಯೆ ಮಾಡಿದ ಘಟನೆ  ನಡೆದಿದೆ.

ಘಟನೆಯ ನಂತರ ಎಸ್‌ಟಿಎಫ್ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ರೌಡಿಗಳ ಪಟ್ಟಿಯಲ್ಲಿ ಹೆಸರನ್ನು ಹೊಂದಿದ್ದ ಪೃಥ್ವಿರಾಜ್ ಎಂಬಾತ ಸಂಜರಾಪುರ ವಲಯದಲ್ಲಿ ಅವಿತಿರುವ ಸಾಧ್ಯತೆಯ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ಲಖನೌದಿಂದ ಆಗಮಿಸಿದ ಎಟಿಎಫ್ ಸಿಬ್ಬಂದಿ ಆ ಪ್ರದೇಶವನ್ನು ಸುತ್ತುವರಿದಿದ್ದರು  ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಕುಮಾರ್ ರಾಣಾ ಹೇಳಿದ್ದಾರೆ.

ADVERTISEMENT

ಆ ಪ್ರದೇಶದಲ್ಲಿದ್ದ ಗುಡಿಸಲೊಂದರಿಂದ ತೂರಿ ಬಂದ ಗುಂಡೊಂದು ಸಿಬ್ಬಂದಿಯೊಬ್ಬರ ಎದೆಗೆ ತಾಗಿತು. ದಾಳಿಗೆ ಪ್ರತಿಕ್ರಿಯೆಯಾಗಿ ಎಸ್‌ಟಿಎಫ್ ತಂಡ ಪ್ರತಿದಾಳಿ ನಡೆಸಿದ ಈ ಸಂದರ್ಭದಲ್ಲಿ ಗುಡಿಸಲಿಗೆ ಬೆಂಕಿ ಹಚ್ಚಿಕೊಂಡಿತು ಎಂದು ಅವರು ಹೇಳಿದ್ದಾರೆ.

ಭಾನುವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ತೆರಳಿದ ನಿವಾಸಿಗಳು ಆ ಗುಡಿಸಲಿನಲ್ಲಿ ಬ್ರಿಜ್‌ಪಾಲ್ ಸಿಂಗ್ ಎಂಬ ರೈತ ವಾಸಿಸುತ್ತಿದ್ದ ಎಂದು ಎಸ್‌ಟಿಎಫ್‌ಗೆ ತಿಳಿಸಿದರು. 

ಗುಡಿಸಲಿಗೆ ಬೆಂಕಿ ಹತ್ತಿಕೊಂಡಿದ್ದರಿಂದ ರೈತನ ದೇಹ ಸುಟ್ಟು ಕರಕಲಾಗಿತ್ತು. ಆತನ ಪತ್ನಿ ಹಾಗೂ ಪುತ್ರ ಬ್ರಿಜ್‌ಪಾಲ್ ಸಿಂಗ್‌ನ ಮೃತದೇಹವನ್ನು ಗುರುತಿಸಿದ್ದಾರೆ.  ಆ ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು.

ರೈತನ ಹತ್ಯೆಗೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಬಾದ್ವಾನ್-ಆಗ್ರಾ ಹೆದ್ದಾರಿಯನ್ನು ತಡೆದು ಪ್ರತಿಭಟಿಸಿದರು.
ಹತ್ಯೆಗೊಳಗಾದ ರೈತನ ಸಂಬಂಧಿಕರು ನೀಡಿದ ದೂರಿನ ಅನ್ವಯ ಪೊಲೀಸ್ ಸಿಬ್ಬಂದಿ ವಿರುದ್ಧ ಕೊಲೆ ಮಾಡಿದ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ರಾಣಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.