ಮುಂಬೈ: ಉನ್ನಾವ್ ಮತ್ತು ಕಠುವಾದ ಎರಡು ಭೀಕರ ಅತ್ಯಾಚಾರ ಪ್ರಕರಣಗಳು ರಾಷ್ಟ್ರದ ಪ್ರಜ್ಞೆಯನ್ನು ಕಲಕಿದ್ದು ಈ ಬಗ್ಗೆ ಸುದ್ದಿ ತಾಣಗಳು ಮತ್ತು ರಾಜಕಾರಣಿಗಳು ಹೇಳಿಕೆಗಳ ಇಣುಕು ನೋಟ ಇಲ್ಲಿದೆ.
ಜಮ್ಮು ಬಳಿ ಕಠುವಾದಲ್ಲಿ ಜನವರಿ ತಿಂಗಳಲ್ಲಿ ಎಂಟು ವರ್ಷದ ಬಾಲೆಯನ್ನು ಅಪಹರಿಸಿ ನಡೆಸಲಾದ ಅತ್ಯಾಚಾರವು ಕೊಲೆಯಲ್ಲಿ ಅಂತ್ಯವಾಗಿದೆ. ಉತ್ತರಪ್ರದೇಶದ ಉನ್ನಾವ್ದಲ್ಲಿ ಕಳೆದ ವರ್ಷ ಜೂನ್ ತಿಂಗಳಲ್ಲಿ ನಡೆದ ಅತ್ಯಾಚಾರ ಪ್ರಕರಣ ಆರೋಪಿಗಳನ್ನು ರಕ್ಷಿಸಲು ರಾಜಕೀಯ ಹಿತಾಸಕ್ತಿಗಳು, ಅಧಿಕಾರಶಾಹಿ, ಪೊಲೀಸ್ ಹಾಗೂ ವಕೀಲರು ಮುಂದಾದಂತಹ ಬೆಳವಣಿಗೆಗಳು ನಡೆದಿವೆ.
ದಿ ಕ್ವಿಂಟ್ ಸುದ್ದಿ ತಾಣ, ಉನ್ನಾವ್ ಮತ್ತು ಕಠುವಾ ಅತ್ಯಾಚಾರ ಪ್ರಕರಣದ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು? ಎಂಬ ಸುದ್ದಿಯನ್ನು ಪ್ರಕಟಿಸಿದೆ. ಇದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉನ್ನಾವ್ ಮತ್ತು ಕಠುವಾ ಅತ್ಯಾಚಾರ ಪ್ರಕರಣ ಕುರಿತಂತೆ ಮಾತನಾಡಿದಾಗ ಈ ಸುದ್ದಿಯನ್ನು ಅಪ್ಡೇಟ್ ಮಾಡಲಾಗುವುದು ಎಂದು ಹೇಳಿದೆ.
ದಿ ವೈರ್ ಸುದ್ದಿ ತಾಣ ಕೂಡ ದಿ ಕ್ವಿಂಟ್ ಮಾದರಿಯಲ್ಲೇ ಸುದ್ದಿ ಮಾಡಿದೆ. ಈ ಸುದ್ದಿಯನ್ನು ಮೊದಲು ಪ್ರಕಟಿಸಿದಕ್ಕಾಗಿ ದಿ ಕ್ವಿಂಟ್ ಗೆ ಧನ್ಯವಾದಗಳನ್ನು ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಅಭಿಪ್ರಾಯಗಳನ್ನು ಪ್ರಕಟಿಸಿದೆ.
ಈ ಎರಡು ಘಟನೆಗಳ ಬಗ್ಗೆ ಇಲ್ಲಿಯವರೆಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿಯ ಅಧ್ಯಕ್ಷರಾಗಿರುವ ಅಮಿತ್ ಶಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕವೂ ಪ್ರತಿಕ್ರಿಯೆಯ ಪೋಸ್ಟ್ಗಳನ್ನು ಪ್ರಕಟಿಸಿಲ್ಲ.
ಕರ್ನಾಟಕದ ಬಿಜೆಪಿ ನಾಯಕರಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ, ಸುರೇಶ್ ಕುಮಾರ್ ಸಹ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ರಾಹುಲ್ ಗಾಂಧಿ ಉನ್ನಾವ್ ಮತ್ತು ಕಠುವಾ ಅತ್ಯಾಚಾರ ಪ್ರಕರಣದಲ್ಲಿನ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಮಧ್ಯರಾತ್ರಿ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದ್ದರು. ಚುನಾವಣೆ ಹತ್ತಿರದಲ್ಲಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯೆ ಕೊಟ್ಟಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.