ಭೋಪಾಲ್: ರೈತರ ಪ್ರತಿಭಟನೆ, ಹಿಂಸಾಚಾರ ಹೆಚ್ಚಿದ್ದ ಹಿನ್ನೆಲೆಯಲ್ಲಿ ಶಾಂತಿಗಾಗಿ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಉಪವಾಸವನ್ನು ಭಾನುವಾರ ಕೊನೆಗೊಳಿಸಿದ್ದಾರೆ.
ಚೌಹಾಣ್ ಅವರು ಭೋಪಾಲದ ಬಿಎಚ್ಇಎಲ್ನ ದಸ್ಸೆರಾ ಮೈದಾನದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ ಉಪವಾಸ ಆರಂಭಿಸಿದ್ದರು. ಈ ಮಧ್ಯೆ, ಮಂದಸೌರ್ನಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ರೈತರ ಪೈಕಿ ನಾಲ್ವರ ಕುಟುಂಬದವರು ಮತ್ತು ಬೃಹತ್ ಸಂಖ್ಯೆಯ ರೈತರು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದಾರೆ. ಉಪವಾಸ ಅಂತ್ಯಗೊಳಿಸುವಂತೆ ಸಂತ್ರಸ್ತರ ಕುಟುಂಬದವರು ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದರು ಎನ್ನಲಾಗಿದೆ.
ಸಾಲಮನ್ನಾ ಮತ್ತು ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಮಂದಸೌರ್ನಲ್ಲಿ ಜೂನ್ 1ರಿಂದ ರೈತರು ನಡೆಸುತ್ತಿದ್ದ ಪ್ರತಿಭಟನೆ ಕೆಲ ದಿನಗಳ ಹಿಂದೆ ಹಿಂಸಾಚಾರಕ್ಕೆ ತಿರುಗಿತ್ತು. ಈ ಸಂದರ್ಭ, ಪೊಲೀಸರ ಗುಂಡೇಟಿಗೆ ಆರು ಮಂದಿ ರೈತರು ಮೃತಪಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.