ADVERTISEMENT

ಎಟಿಎಂಗಳಲ್ಲಿ ನೋಟು ಕೊರತೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 19:58 IST
Last Updated 17 ಏಪ್ರಿಲ್ 2018, 19:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕ ಸೇರಿ ಹಲವು ರಾಜ್ಯಗಳ ಎಟಿಎಂಗಳಲ್ಲಿ ನೋಟುಗಳ ಕೊರತೆ ಉಂಟಾಗಿದೆ. ಪರಿಸ್ಥಿತಿಯು ನೋಟು ರದ್ದತಿಯ ನಂತರದ ದಿನಗಳನ್ನು ನೆನಪಿಸುವಂತಿದೆ ಎಂದು ಹಲವು ಗ್ರಾಹಕರು ದೂರಿದ್ದಾರೆ. ತಕ್ಷಣ ಕಾರ್ಯ‍ಪ್ರವೃತ್ತವಾಗಿರುವ ಕೇಂದ್ರ ಸರ್ಕಾರ, ಜನರ ಆತಂಕ ನಿವಾರಿಸಲು ಮುಂದಾಗಿದೆ.

ಕೆಲವು ಭಾಗಗಳಲ್ಲಿ ನೋಟುಗಳಿಗೆ ದಿಢೀರ್‌ ಬೇಡಿಕೆ ಹೆಚ್ಚಾಗಿದ್ದು ತಾತ್ಕಾಲಿಕ ಕೊರತೆಯ ಸ್ಥಿತಿ ಸೃಷ್ಟಿಸಿದೆ. ಹಾಗಿದ್ದರೂ ಕೊರತೆ ನೀಗಿಸುವುದಕ್ಕಾಗಿ ನೋಟು ಮುದ್ರಣವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೇಳಿವೆ.

ನೋಟು ಕೊರತೆಯ ವಿದ್ಯಮಾನಕ್ಕೆ ಸಂಬಂಧಿಸಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಟ್ವೀಟ್‌ ಮಾಡಿದ್ದಾರೆ. ‘ದೇಶದಲ್ಲಿ ನೋಟುಗಳ ಲಭ್ಯತೆಯ ಅವಲೋಕನ ನಡೆಸಿದ್ದೇನೆ. ನೋಟುಗಳ ಚಲಾವಣೆ ಅಗತ್ಯಕ್ಕಿಂತ ಹೆಚ್ಚೇ ಇದೆ. ಬ್ಯಾಂಕುಗಳಲ್ಲಿಯೂ ಹಣ ಲಭ್ಯ ಇದೆ. ಕೆಲವು ಪ್ರದೇಶಗಳಲ್ಲಿ ದಿಢೀರ್‌ ಮತ್ತು ಅಸಹಜ ರೀತಿಯ ಬೇಡಿಕೆ ಹೆಚ್ಚಳದಿಂದಾಗಿ ಉಂಟಾದ ಕೊರತೆ ಸ್ಥಿತಿಯನ್ನು ತಕ್ಷಣವೇ ಸರಿಪಡಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಅದರ ಬೆನ್ನಿಗೇ, ಕೇಂದ್ರ ಹಣಕಾಸು ವ್ಯವಹಾರಗಳ ಕಾರ್ಯದರ್ಶಿ ಸುಭಾಷ್‌ಚಂದ್ರ ಗರ್ಗ್‌ ಮಾಧ್ಯಮಗೋಷ್ಠಿ ನಡೆಸಿ ನೋಟು ಕೊರತೆ ಸಮಸ್ಯೆ ನಿವಾರಿಸಲು ಕೈಗೊಂಡ ಕ್ರಮಗಳನ್ನು ವಿವರಿಸಿದ್ದಾರೆ.

ನೋಟು ಕೊರತೆ ಇಲ್ಲ, ಆದರೆ ಲಭ್ಯತೆಯಲ್ಲಿ ಅಸಮತೋಲನ ಉಂಟಾಗಿದೆ. ಬೆಳೆ ಖರೀದಿ ಋತು ಆರಂಭವಾಗಿದೆ. ಈ ಸಮಯದಲ್ಲಿ ಯಾವಾಗಲೂ ನೋಟುಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಇದರಿಂದಾಗಿಯೇ ಪಂಜಾಬ್‌, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ನೋಟು ಕೊರತೆ ಉಂಟಾಗಿದೆ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌ ಹೇಳಿದ್ದಾರೆ.

ಕೆಲವು ದಿನಗಳಿಂದ ಕೊರತೆ ಎದುರಿಸುತ್ತಿದ್ದ ಗುಜರಾತ್‌ನಲ್ಲಿ ಮಂಗಳವಾರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಪಟ್ಟಣಗಳು, ಗ್ರಾಮಗಳು ಮತ್ತು ಆದಿವಾಸಿಗಳು ಹೆಚ್ಚಾಗಿರುವ ಪ್ರದೇಶಗಳ ಎಟಿಎಂಗಳಲ್ಲಿ ಹಣವೇ ದೊರೆಯುತ್ತಿಲ್ಲ. ರಾಜ್ಯದ ಎಟಿಎಂಗಳಲ್ಲಿ ನೋಟುಗಳ ತೀವ್ರ ಕೊರತೆ ಇದೆ ಎಂದು ಹಣಕಾಸು ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ನಿತಿನ್‌ ಪಟೇಲ್‌ ಹೇಳಿದ್ದಾರೆ. 

ರಾಜ್ಯದಲ್ಲಿ ತೀವ್ರ ಕೊರತೆ: ಕರ್ನಾಟಕದಾದ್ಯಂತ ಇರುವ 17 ಸಾವಿರಕ್ಕೂ ಹೆಚ್ಚು ಎಟಿಎಂಗಳ ಪೈಕಿ 5 ಸಾವಿರಕ್ಕೂ ಹೆಚ್ಚು ಎಟಿಎಂಗಳು ಮಂಗಳವಾರ ಕಾರ್ಯನಿರ್ವಹಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಗರಿಷ್ಠ ಪ್ರಮಾಣದಲ್ಲಿ ನಗದು ಕೊರತೆ ಕಂಡು ಬಂದ ಬ್ಯಾಂಕ್‌ ಎಟಿಎಂಗಳ ಪೈಕಿ ಎಸ್‌ಬಿಐ, ಬ್ಯಾಂಕ್‌ ಆಫ್‌ ಬರೋಡಾ, ಕೆನರಾ ಬ್ಯಾಂಕ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್ ಸೇರಿವೆ.

ಎಟಿಎಂ ಸಮಸ್ಯೆ ಕಾರಣ

ನೋಟುಗಳ ಕೊರತೆ ಇಲ್ಲ. ಹಾಗಿದ್ದರೂ ಎಲ್ಲ ನಾಲ್ಕು ಮುದ್ರಣ ಕೇಂದ್ರಗಳಲ್ಲಿ ನೋಟುಗಳ ಮುದ್ರಣ ಪ್ರಮಾಣವನ್ನು ಹೆಚ್ಚಿಸಲಾಗಿದೆ. ದೇಶದ ಕೆಲವು ಪ್ರದೇಶಗಳಲ್ಲಿ ನೋಟುಗಳ ಕೊರತೆಗೆ ಎಟಿಎಂಗಳಲ್ಲಿನ ಮೂಲಸೌಕರ್ಯ ಸಮಸ್ಯೆಯೇ ಕಾರಣ ಎಂದು ಆರ್‌ಬಿಐ ಹೇಳಿದೆ.

ಕೆಲವು ಎಟಿಎಂಗಳಿಗೆ ಹಣ ಪೂರೈಕೆಯಲ್ಲಿ ಸಮಸ್ಯೆಗಳಿದ್ದರೆ ಕೆಲವು ಎಟಿಎಂಗಳ ಮರು ಹೊಂದಾಣಿಕೆ ಕೆಲಸ ನಡೆಯುತ್ತಿದೆ. ಹಾಗಾಗಿ ಕೊರತೆ ಕಾಣಿಸಿಕೊಂಡಿದೆ. ಈ ಎರಡೂ ವಿಚಾರಗಳ ಬಗ್ಗೆ ಗಮನ ಹರಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಮುದ್ರಣ ಐದು ಪಟ್ಟು ಹೆಚ್ಚಳ

₹500 ಮುಖಬೆಲೆಯ ನೋಟುಗಳ ಮುದ್ರಣವನ್ನು ಐದು ಪಟ್ಟು ಹೆಚ್ಚಿಸಲಾಗಿದೆ. ಪ್ರತಿ ದಿನ ₹500 ಮುಖಬೆಲೆಯ ₹2,500 ಕೋಟಿ ಮೌಲ್ಯದ ನೋಟುಗಳನ್ನು ಮುದ್ರಿಸಲಾಗುತ್ತಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್‌ ಗರ್ಗ್‌ ಹೇಳಿದ್ದಾರೆ. ನಗದು ಕೊರತೆಯ ವರದಿಗಳು ಪ್ರಸಾರವಾಗುತ್ತಿದ್ದಂತೆಯೇ ಮಾಧ್ಯಮಗೋಷ್ಠಿ ನಡೆಸಿದ ಅವರು ಈ ವಿವರ ತಿಳಿಸಿದ್ದಾರೆ. ₹500 ಮುಖಬೆಲೆಯ ₹75 ಸಾವಿರ ಕೋಟಿ ಮೌಲ್ಯದ ನೋಟುಗಳು ಪ್ರತಿ ತಿಂಗಳು  ಮುದ್ರಣವಾಗುತ್ತಿವೆ ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ.

ಹಣ ಇಲ್ಲದ ರಾಜ್ಯಗಳು

* ಕರ್ನಾಟಕ
* ಆಂಧ್ರಪ್ರದೇಶ
* ತೆಲಂಗಾಣ
* ಮಧ್ಯಪ್ರದೇಶ
* ಉತ್ತರ ಪ್ರದೇಶ
* ಛತ್ತೀಸಗಡ
* ಮಣಿಪುರ
* ಬಿಹಾರ

ದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚೇ ನಗದು ಇದೆ. ಬ್ಯಾಂಕುಗಳಲ್ಲಿಯೂ ನಗದು ಲಭ್ಯ ಇದೆ. ಕೆಲವು ಪ್ರದೇಶಗಳಲ್ಲಿ ದಿಢೀರ್‌ ಮತ್ತು ಅಸಹಜ ನಗದು ಬೇಡಿಕೆ ಹೆಚ್ಚಳ ಕೊರತೆಗೆ ಕಾರಣ.
– ಅರುಣ್‌ ಜೇಟ್ಲಿ, ಕೇಂದ್ರ ಹಣಕಾಸು ಸಚಿವ

ನೋಟುಗಳನ್ನು ಸಂಗ್ರಹಿಸಿ ಇರಿಸಿಕೊಳ್ಳಬೇಡಿ. ನೋಟು ಇಲ್ಲ ಎಂಬ ಅನಗತ್ಯ ಭಯ  ಬೇಡ. ವಹಿವಾಟಿಗೆ ಡಿಜಿಟಲ್‌ ವಿಧಾನವೇ ಅತ್ಯುತ್ತಮ. ಹಾಗಾಗಿ ಅದನ್ನು ಬಳಸಿ.
– ಸುಭಾಷ್‌ ಗರ್ಗ್‌, ಕೇಂದ್ರ ಹಣಕಾಸು ಕಾರ್ಯದರ್ಶಿ

ನೋಟು ರದ್ದತಿಯ ದಿನಗಳ ಭೀತಿ ಮತ್ತೆ ಜನರನ್ನು ಆವರಿಸಿದೆ. ನೋಟು ರದ್ದತಿಯ ಮೂಲಕ ದೇಶದ ಬ್ಯಾಂಕ್‌ ವ್ಯವಸ್ಥೆಯನ್ನೇ ಪ್ರಧಾನಿ ನಾಶ ಮಾಡಿದ್ದಾರೆ.
– ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.