ADVERTISEMENT

ಎಟಿಸಿ ಗೈರಿನಲ್ಲೂ ಇಳಿದ ವಿಮಾನ!

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST

ಚೆನ್ನೈ (ಐಎಎನ್‌ಎಸ್): ಕರ್ತವ್ಯದ ಮೇಲಿರಬೇಕಿದ್ದ ಇಬ್ಬರು ವಿಮಾನ ಸಂಚಾರ ನಿಯಂತ್ರಕರು (ಎಟಿಸಿ) ಗೈರುಹಾಜರಾಗಿದ್ದ ಕಾರಣ ಬೇರೊಬ್ಬ ಅಧಿಕಾರಿ ಮತ್ತು ಅಗ್ನಿಶಾಮಕ ಸಹಾಯಕರ ನೆರವಿನಿಂದಲೇ ವಿಮಾನವೊಂದು ಇಳಿದಿದ್ದ ಘಟನೆ ತಡವಾಗಿ ವರದಿಯಾಗಿದೆ.

 ಜನವರಿ 9ರ ಬೆಳಿಗ್ಗೆ ಹೈದರಾಬಾದ್‌ನಿಂದ ಹೊರಟ 60 ಪ್ರಯಾಣಿಕರಿದ್ದ ಜೆಟ್ ವಿಮಾನ ತಿರುಪತಿಗೆ ಬಂದಿಳಿದಾಗ ಇದು ಸಂಭವಿಸಿತು.

ನಿಯಮಾವಳಿ ಪ್ರಕಾರ ವಿಮಾನ ಇಳಿಯುವ ಸಂದರ್ಭದಲ್ಲಿ ನಿಗದಿತ ಎಟಿಸಿ ಅಧಿಕಾರಿಗಳು ಇರಲೇಬೇಕು. ಹಾಗಿಲ್ಲದಿದ್ದರೆ ಎಟಿಸಿಗಳು ನಿಗದಿತ ಸ್ಥಳಕ್ಕೆ ಬರುವ ತನಕ ವಿಮಾನವನ್ನು ಮೇಲೆಯೇ ಸುತ್ತು ಹಾಕಿಸಿ, ನಂತರ ಇಳಿಸಬೇಕಿತ್ತು. ಇಲ್ಲದಿದ್ದರೆ, 15 ನಿಮಿಷ ಹಾರಾಟದಷ್ಟು ಸಮೀಪದಲ್ಲಿರುವ ಚೆನ್ನೈನಲ್ಲಿ ಅದನ್ನು ಇಳಿಸಬೇಕಿತ್ತು ಎಂಬುದು ಇಲಾಖೆಯ ಕೆಲವು ಅಧಿಕಾರಿಗಳ ಅಭಿಪ್ರಾಯ.

ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಾದೇಶಿಕ ಕಾರ್ಯನಿರ್ವಾಹಕ ನಿರ್ದೇಶಕ ಡಿ.ದೇವರಾಜ್ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.