ನವದೆಹಲಿ (ಪಿಟಿಐ): ಗಡಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಾಡಿರುವ ಟೀಕೆಗೆ ಉತ್ತರ ನೀಡಿರುವ ಕಾಂಗ್ರೆಸ್, ಎನ್ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಆಗಿರುವ ವಿದೇಶಾಂಗ ನೀತಿಯ ಲೋಪಗಳನ್ನು ಪ್ರಸ್ತಾಪಿಸಿದೆ.
‘ಗಡಿಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳಿಗೆ ಸೇನೆ ಕಾರಣವಲ್ಲ ಬದಲಿಗೆ ತೊಂದರೆ ಇರುವುದು ದೆಹಲಿಯಲ್ಲಿ’ ಎಂದು ಹರಿಯಾಣದ ರೇವಾರಿಯಲ್ಲಿ ನಡೆದ ಸಭೆಯಲ್ಲಿ ಮೋದಿ ಆರೋಪಿಸುವ ಮೂಲಕ ಯುಪಿಎ ಸರ್ಕಾರದ ವಿದೇಶಾಂಗ ನೀತಿಯನ್ನು ಕಟುವಾಗಿ ಟೀಕಿಸಿದ್ದನ್ನು ಪ್ರಸ್ತಾಪಿಸಿದ ಕೇಂದ್ರ ವಾರ್ತಾ ಸಚಿವ ಮನಿಷ್ ತಿವಾರಿ, ಎನ್ಡಿಎ ಅಧಿಕಾರಾವಧಿಯಲ್ಲಿ ನಡೆದ ಅವಾಂತರಗಳನ್ನು ಟ್ವೀಟ್ ಮಾಡಿದ್ದಾರೆ.
‘ಕಾರ್ಗಿಲ್ ಕದನ, ಕಂದಹಾರ್ ಅಪಹರಣ, ಸಂಸತ್ತಿನ ಮೇಲೆ ದಾಳಿಯಂತಹ ಪ್ರಕರಣಗಳು ನಡೆದದ್ದು ಎನ್ಡಿಎ ಅಧಿಕಾರಾವಧಿಯಲ್ಲೇ’ ಎಂದು ತಿವಾರಿ ಟೀಕಿಸಿದ್ದಾರೆ.
ವಿದೇಶಾಂಗ ನೀತಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಅಟಲ್ಬಿಹಾರಿ ವಾಜಪೇಯಿ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಮೋದಿ ರೇವಾರಿಯ ಸಭೆಯಲ್ಲಿ ಶ್ಲಾಘಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.