ನವದೆಹಲಿ: ಅಮರನಾಥ ಯಾತ್ರಿಗಳ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿ ಟ್ವಿಟರ್ನಲ್ಲಿ ಆಕ್ಷೇಪಾರ್ಹವಾಗಿ ಸಂದೇಶ ಪ್ರಕಟಿಸಿದ್ದ ಹವ್ಯಾಸಿ ಬರಹಗಾರ್ತಿ ಸುಚಿ ಕಾಲ್ರಾ ಎಂಬುವವರಿಗೆ ಗೃಹ ಸಚಿವ ರಾಜನಾಥ್ ಸಿಂಗ್ ಅವರು ತೀಕ್ಷ್ಣವಾದ ತಿರುಗೇಟು ನೀಡಿದ್ದಾರೆ.
ಅಮರನಾಥ ಯಾತ್ರಿಗಳ ಮೇಲಿನ ದಾಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ದಾಳಿ ಖಂಡಿಸಿ ರಾಜನಾಥ್ ಅವರಿಗೆ ಟ್ವೀಟ್ ಮಾಡಿದ್ದ ಸುಚಿ ಅವರು, ‘ಈ ಸಂದರ್ಭದಲ್ಲಿ ಕಾಶ್ಮೀರಿಯತ್(ಕಾಶ್ಮೀರದ ಏಕತೆಗೆ ಸಂಬಂಧಿಸಿದ ಶಬ್ದ) ಚಳವಳಿಗೆ ಪ್ರೇರಣೆ ನೀಡಿದವರು ಯಾರು? ಇದು ನಿಮ್ಮ ಕೆಲಸವಲ್ಲ. ಆ ಹೇಡಿಗಳನ್ನು ಹೊರಗೆಳೆದು ಹತ್ಯೆ ಮಾಡಿ’ ಎಂಬ ಸಂದೇಶ ಪ್ರಕಟಿಸಿದ್ದರು.
ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ರಾಜನಾಥ್, ‘ಕಾಲ್ರಾ ಅವರೇ ನಾನು ನಿಜವಾಗಿಯೂ ಆ ಕೆಲಸ ಮಾಡುತ್ತೇನೆ. ದೇಶದ ಎಲ್ಲ ಕಡೆ ಶಾಂತಿ ಮತ್ತು ಸುವ್ಯವಸ್ಥೆ ನೆಲೆಸುವಂತೆ ಮಾಡುವುದು ನನ್ನ ಕರ್ತವ್ಯ. ಎಲ್ಲ ಕಾಶ್ಮೀರಿಗರು ಭಯೋತ್ಪಾದಕರಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.