ನವದೆಹಲಿ (ಪಿಟಿಐ): ಇಸ್ರೊದ ವಾಣಿಜ್ಯ ಘಟಕ ಅಂತರಿಕ್ಷ್ ಹಾಗೂ ದೇವಾಸ್ ಮಲ್ಟಿ ಮೀಡಿಯಾ ನಡುವೆ ಆಗಿರುವ ವಿವಾದಾತ್ಮಕ ಎಸ್-ಬ್ಯಾಂಡ್ ತರಂಗಾಂತರ ಒಪ್ಪಂದವನ್ನು ಭದ್ರತೆಗೆ ಸಂಬಂಧಿಸಿದ ಕೇಂದ್ರ ಸಂಪುಟ ಸಮಿತಿ ರದ್ದುಗೊಳಿಸಿತು.
ಪ್ರಧಾನಿ ಮನಮೋಹನಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಾಹ್ಯಾಕಾಶ ಆಯೋಗವು ಶಿಫಾರಸು ಮಾಡಿದಂತೆ ಈ ವಿವಾದಾತ್ಮಕ ಒಪ್ಪಂದವನ್ನು ರದ್ದುಗೊಳಿಸಲಾಯಿತು.
ಅಂತರಿಕ್ಷ್ ಮತ್ತು ದೇವಾಸ್ ನಡುವಿನ ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆ ಒಪ್ಪಂದದ ಬಗ್ಗೆ ಲೆಕ್ಕ ಪರಿಶೋಧನೆ ನಡೆಸಿದ ಮಹಾಲೇಖಪಾಲರು ‘2 ಲಕ್ಷ ಕೋಟಿ ರೂಪಾಯಿ ಮೊತ್ತದ ನಷ್ಟ’ದ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದು ಭಾರಿ ವಿವಾದವನ್ನೇ ಸೃಷ್ಟಿಸಿತ್ತು. ನಂತರ ಬಾಹ್ಯಾಕಾಶ ಆಯೋಗವು ಒಪ್ಪಂದವನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ದೇವಾಸ್ ಯಾವುದೇ ತನಿಖೆ ನಡೆಸದೆ ಸಹಜನ್ಯಾಯದ ಯಾವುದೇ ರೀತಿ ರಿವಾಜುಗಳನ್ನು ಪಾಲಿಸದ ನಿರ್ಧಾರ ಎಂದು ಬಣ್ಣಿಸಿದ್ದು, ತಾನು ಕಾನೂನು ಮೊರೆ ಹೋಗುವುದಾಗಿ ಬೆದರಿಕೆ ಹಾಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.