ADVERTISEMENT

ಏಪ್ರಿಲ್ ಒಳಗೆ ಗ್ಯಾಸ್ ಕಾರ್ಡ್ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 19:30 IST
Last Updated 16 ಅಕ್ಟೋಬರ್ 2012, 19:30 IST

ಚೆನ್ನೈ: ಪ್ರತಿ ಅಡುಗೆ ಅನಿಲ ಬಳಕೆದಾರರು ಇನ್ನು ಮುಂದೆ ತಮ್ಮ ಸದಸ್ಯತ್ವ ಸಂಖ್ಯೆ, ಸಿಲಿಂಡರ್ ಸರಬರಾಜಾದ ದಿನಾಂಕ ಮತ್ತಿತರ ಮಾಹಿತಿ ಒಳಗೊಂಡ ಪುಸ್ತಕ (ಗ್ಯಾಸ್ ಕಾರ್ಡ್ ಬುಕ್‌ಲೆಟ್) ಹೊಂದಿರುವುದು ಕಡ್ಡಾಯ. ಇಂತಹ ಕಾರ್ಡ್‌ಗಳನ್ನು 2013ರ ಏಪ್ರಿಲ್ ಒಳಗಡೆ ಪಡೆದುಕೊಳ್ಳುವಂತೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸೂಚನೆ ನೀಡಿದೆ.

ಎ್ಲ್ಲಲಾ ತೈಲ ಮಾರಾಟ ಕಂಪೆನಿಗಳ ಪರವಾಗಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ) ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಲಾಗಿದ್ದು, ಕಳೆದುಹೋಗಿರುವ ಇಲ್ಲವೆ ಹರಿದು ಹೋಗಿರುವ ಇಂತಹ ಕಾರ್ಡ್‌ಗಳನ್ನು ಗ್ರಾಹಕರು ನಿಗದಿತ ಶುಲ್ಕವನ್ನು ಪಾವತಿ ಮಾಡಿ ಹೊಸದಾಗಿ ಪಡೆಯಬೇಕಾಗುತ್ತದೆ.

ವರ್ಷಕ್ಕೆ 6 ಗೃಹಬಳಕೆ ಸಬ್ಸಿಡಿ ದರದ ಸಿಲಿಂಡರ್‌ಗಳನ್ನು ಮಿತಿಗೊಳಿಸಿ ಸರ್ಕಾರ ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ಪ್ರತಿ ಗ್ರಾಹಕರು ಸಂಬಂಧಿಸಿದ ವಿತರಕರಿಂದ ಇಂತಹ ಕಾರ್ಡ್‌ಗಳನ್ನು ಪಡೆಯುವುದು ಕಡ್ಡಾಯ ಎಂದು ತಿಳಿಸಲಾಗಿದೆ.

ಕಾರ್ಡ್‌ಗಳಲ್ಲಿರುವ ಗ್ರಾಹಕರ ಸದಸ್ಯತ್ವ ಸಂಖ್ಯೆ, ಸರಣಿ ಸಂಖ್ಯೆಯನ್ನು ಸಿಲಿಂಡರ್ ಪೂರೈಸುವ ವಿತರಕರು ತಮ್ಮ ವ್ಯವಸ್ಥೆಯಲ್ಲಿ ದಾಖಲು ಮಾಡಿಕೊಂಡಿರಬೇಕಾಗುತ್ತದೆ ಎಂದು ಐಒಸಿ ಕಾರ್ಯನಿರ್ವಾಹಕ ನಿರ್ದೇಶಕ (ಕರ್ನಾಟಕ) ಆರ್.ಕೆ. ಅರೋರಾ ತಿಳಿಸಿದರು. ಸಿಲಿಂಡರ್‌ಗಳನ್ನು ಸರಬರಾಜು ಮಾಡುವ ಸಂದರ್ಭದಲ್ಲಿ ಗ್ರಾಹಕರು ಈ ಕಾರ್ಡ್‌ಗಳನ್ನು ಗ್ಯಾಸ್ ಸರಬರಾಜು ಸಿಬ್ಬಂದಿಗೆ ನೀಡಿದಲ್ಲಿ ಅವರು ಸಿಲಿಂಡರ್ ಸರಬರಾಜು ಆದ ದಿನಾಂಕ ನಮೂದಿಸಿ, ಸಹಿ ಮಾಡಿ ಕೊಡುತ್ತಾರೆ. ಸಿಲಿಂಡರ್ ಸರಬರಾಜು ಮಾಡುವ ಸಂದರ್ಭದಲ್ಲಿ ಗ್ರಾಹಕರು ತಮಗೆ ನೀಡಿದ ವಿತರಕರ ರಶೀದಿಯಲ್ಲಿ ನಮೂದಿಸಲಾದ ಸರಣಿ ಸಂಖ್ಯೆ (ಸಿರಿಯಲ್ ನಂಬರ್)ಗೂ ಕಾರ್ಡ್‌ನಲ್ಲಿರುವ ಸರಣಿ ಸಂಖ್ಯೆಗೂ ತಾಳೆಯಾಗುತ್ತದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು ಎಂದು ಅರೋರಾ ವಿವರಿಸಿದರು.

ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಆರು ಸಬ್ಸಿಡಿ ದರದ ಸಿಲಿಂಡರ್‌ಗಳನ್ನು ಮಿತಿಗೊಳಿಸಿದ ಸರ್ಕಾರದ ನಿರ್ದೇಶನ 2013ರ ಏಪ್ರಿಲ್ 1ರಿಂದ ಅನುಷ್ಠಾನಕ್ಕೆ ಬರುತ್ತಿದ್ದು ಇದು ಗುಂಪು ವಸತಿಯ ಫ್ಲ್ಯಾಟ್‌ಗಳಲ್ಲಿರುವ ಇಲ್ಲವೆ ಗೃಹನಿರ್ಮಾಣ ಸಂಸ್ಥೆಗಳ `ಪೈಪಡ್ ಎಲ್‌ಪಿಜಿ~ ವ್ಯವಸ್ಥೆಗೂ ಅನ್ವಯಿಸುತ್ತದೆ. ಗುಂಪು ವಸತಿ ಸಮುಚ್ಚಯಗಳಲ್ಲಿರುವ ವಿಂಗಡಣೆ ಮಾಡಲಾದ ಗ್ರಾಹಕರಿಗೆ ಸಂಬಂಧಿಸಿದಂತೆಯೂ ಸ್ಪಷ್ಟ ನಿರ್ದೇಶನ ನೀಡಿರುವ ಐಒಸಿ, ವ್ಯಕ್ತಿಗತ ವಿವರಗಳುಳ್ಳ ವಿಳಾಸದ ದಾಖಲಾತಿಗಳನ್ನು ಹಾಗೂ ಬೇರೆ ಯಾವುದೇ ಕಂಪೆನಿಯ ಗ್ಯಾಸ್ ಸಂಪರ್ಕ ಹೊಂದಿಲ್ಲ ಎಂಬ ಪ್ರಮಾಣ ಪತ್ರವನ್ನು ಫ್ಲ್ಯಾಟ್‌ಗಳ ಮುಖ್ಯಸ್ಥರು ಇಲ್ಲವೆ ಗೃಹನಿರ್ಮಾಣ ಸಂಸ್ಥೆಗಳು ಆಯಾ ಗ್ಯಾಸ್ ವಿತರಕರಿಗೆ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಒಂದೇ ಕುಟುಂಬ ಒಂದಕ್ಕಿಂತ ಹೆಚ್ಚು ಗ್ಯಾಸ್ ಸಂಪರ್ಕ ಹೊಂದಿರುವ ಬಗ್ಗೆ ಪರಿಶೀಲನೆ ನಡೆಸಲು ಗ್ಯಾಸ್ ಕಂಪೆನಿಗಳು `ನಿಮ್ಮ ಗ್ರಾಹಕರನ್ನು ತಿಳಿಯಿರಿ~ (ಕೆವೈಸಿ) ಕಾರ್ಯಾಚರಣೆ ಕೈಗೊಂಡಿದ್ದು, ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಹೊಸದಾಗಿ ಗ್ಯಾಸ್ ಸಂಪರ್ಕಕ್ಕೆ ಅರ್ಜಿಗಳನ್ನು ವಿತರಿಸಲಾಗುವುದು. ಮುಂಬರುವ ದಸರಾ, ದೀಪಾವಳಿ ಸಂದರ್ಭದಲ್ಲಿಯ ಅಧಿಕ ಬೇಡಿಕೆ ಪೂರೈಸಲು ಕಂಪೆನಿಗಳಲ್ಲಿ ಸಾಕಷ್ಟು ಸಿಲಿಂಡರ್‌ಗಳ ದಾಸ್ತಾನು ಇಡಲಾಗಿದೆ ಎಂದೂ ಅರೋರಾ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.