ನವದೆಹಲಿ (ಪಿಟಿಐ): ವಿವಾದಗಳ ಸರಣಿಯಲ್ಲಿ ಸಿಲುಕಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನ್ನು (ಐಪಿಎಲ್) ಬರ್ಕಾಸ್ತು ಮಾಡಿ ತಿಪ್ಪೆಗೆಸೆಯಬೇಕು ಎಂದು ಒತ್ತಾಯಿಸಿ ಭಾರತದ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಭಾನುವಾರ ಇಲ್ಲಿ ನಿರಶನ ಸತ್ಯಾಗ್ರಹ ಆರಂಭಿಸಿದರು.
ಬಿಜೆಪಿ ನಾಯಕರೂ ಆಗಿರುವ ಆಜಾದ್ ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಬೆಳಗ್ಗೆ ನಿರಶನ ಆರಂಭಿಸಿದರು.
~ಐಪಿಲ್ ವೀಕ್ಷಕರೆಲ್ಲರಿಗೂ ನನ್ನದೊಂದು ಪ್ರಶ್ನೆಯಿದೆ. ಅಲ್ಲಿ ಪಾರದರ್ಶಕತೆ ಇರಬಾರದೇ? ಕ್ರೀಡೆಯಲ್ಲಿ ಅತಿಯಾದ ರಾಜಕೀಯ ತುಂಬಿದೆ. ರಾಜಕೀಯಲ್ಲಿ ಒಂದಷ್ಟು ಕ್ರೀಡಾ ಮನೋಭಾವನೆ ಬರಲಿ ಎಂದಷ್ಟೇ ನಾನು ಹಾರೈಸುವೆ~ ಎಂದು ಆಜಾದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಹೇಳಿದರು.
~ಕ್ರಿಕೆಟ್ ನಮ್ಮ ರಾಷ್ಟ್ರದಲ್ಲಿ ಧರ್ಮವಾಗಿ ಬಿಟ್ಟಿದೆ. ಆದರೆ ಯುವಕರು ರಾಷ್ಟ್ರಕ್ಕಾಗಿ ಆಡುವ ಬದಲು ಐ ಪಿಎಲ್ ನಲ್ಲಿ ಆಡಲು ಬಯಸುವುದನ್ನು ಕಂಡಾ ನನಗೆ ನೋವಾಗುತ್ತದೆ~ ಎಂದು ಅವರು ನುಡಿದರು.
ಇನ್ನೊಬ್ಬ ಕ್ರಿಕೆಟಿಗ ವಿವೇಕ ರಝ್ದನ್ ಕೂಡಾ ಈ ಸಂದರ್ಭದಲ್ಲಿ ಹಾಜರಿದ್ದರು.
ಖಾಸಗಿ ಟಿವಿ ವಾಹಿನಿಯೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ~ಮೋಸದಾಟ~ ಜಾಲದಲ್ಲಿ ಸಿಕ್ಕಿಬಿದ್ದ ಐವರು ಭಾರತೀಯ ಆಟಗಾರರನ್ನು ಬಿಸಿಸಿಐ ಅಮಾನತು ಗೊಳಿಸಿತ್ತು. ಅದರ ಬೆನ್ನಲ್ಲೇ ವಾಂಖೇಡೆ ಕ್ರೀಡಾಂಗಣದಲ್ಲಿ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಅಧಿಕಾರಿಗಳ ಜೊತೆಗೆ ಘರ್ಷಣೆಗೆ ಇಳಿಯವು ಮೂಲಕ ವಿವಾದಕ್ಕೆ ಈಡಾದ ಕೊಲ್ಕತ್ತ ನೈಟ್ ರೈಡರ್ಸ್ ಸಹ ಮಾಲೀಕ ಚಿತ್ರನಟ ಶಾರುಖ್ ಖಾನ್ ಅವರನ್ನು ಎಂಸಿಎಯು ವಾಂಖೇಡೆ ಕ್ರೀಡಾಂಗಣ ಪ್ರವೇಶಿಸದಂತೆ ನಿಷೇಧಿಸಿತು. ಇದಾಗುವಷ್ಟರಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ ಲ್ಯೂಕ್ ಪೊಮರ್ಸ್ ಬ್ಯಾಚ್ ಅವರನ್ನು ಅಮೆರಿಕದ ಮಹಿಳೆಯ ಮಾನಭಂಗ ಆಪಾದನೆಯಲ್ಲಿ ಪೊಲೀಸರು ಬಂಧಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.