ಚೆನ್ನೈ: ಒಖಿ ಚಂಡಮಾರುತದ ಬಿರುಸಿಗೆ ವಿದ್ಯುತ್ ಕಂಬಗಳು ನೆಲಕ್ಕೊರಳಿದ್ದು, ಕನ್ಯಾಕುಮಾರಿಯ ಜನ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ.
ಒಖಿ ಚಂಡಮಾರುತದ ಬಿರುಸಿಗೆ ತಮಿಳುನಾಡು ಮತ್ತು ಕೇರಳದ ನಾಲ್ಕು ಸಾವಿರ ವಿದ್ಯುತ್ ಮಾರ್ಗಗಳು ಹಾನಿಗೆ ಒಳಗಾಗಿವೆ. ಅವುಗಳನ್ನು ಸರಿಪಡಿಸಲು ಒಂದು ವಾರ ಕಾಲವಕಾಶ ಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ. ಶನಿವಾರ ಬೆಳಿಗ್ಗೆ ಬಿರುಸಿನ ಮಳೆಯಾದ ಪರಿಣಾಮ ಕನ್ಯಾಕುಮಾರಿಯ ತಗ್ಗುಪ್ರದೇಶಗಳಲ್ಲಿ ಮೊಳಕಾಲಿನ ಎತ್ತರಕ್ಕೆ ನೀರು ನಿಂತಿದೆ.
ಮಳೆಯಿಂದಾಗಿ ತೊಂದರೆಗೆ ಸಿಲುಗಿದ ಜನರಿಗೆ ನೆರವಾಗಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ಡಿಆರ್ಎಫ್) ಮತ್ತು ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ತಂಡಗಳು ಧಾವಿಸಿವೆ. ಸಾವಿರಕ್ಕೂ ಹೆಚ್ಚು ಜನರಿಗೆ ನಿರಾಶ್ರಿತರ ಕೇಂದ್ರಗಳಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.
ಒಖಿಯ ಹೊಡೆತಕ್ಕೆ ತಮಿಳುನಾಡಿನಲ್ಲಿ ಈವರೆಗೂ 6 ಜನ ಮೃತಪಟ್ಟಿದ್ದಾರೆ. ಜೋರು ಮಳೆಯಿಂದಾಗಿ ಟುಟಿಕೊರಿನ್ ಸುತ್ತಲಿನ ಬಾಳೆ ಬೆಳೆಗಳು ನೆಲಕಚ್ಚಿವೆ. ತಿರುವರೂರಿನ ಜಮೀನುಗಳಲ್ಲಿ ಹಲವಾರು ಬೆಳೆಗಳಿಗೂ ಹಾನಿಯಾಗಿದೆ. ಕಾಣೆಯಾಗಿರುವ 14 ಮೀನುಗಾರರ ಪತ್ತೆಗೆ ನೌಕಪಡೆ ಸಿಬ್ಬಂದಿ ಕಾರ್ಯಚರಣೆ ನಡೆಸುತ್ತಿದ್ದಾರೆ.
ತಮಿಳುನಾಡಿನಲ್ಲಿ ಭಾರಿ ಮಳೆಯಿಂದಾಗಿ ತಮಿರಾಬರಾನಿ ನದಿ ಮೈದುಂಬಿ ಹರಿಯುತ್ತಿದ್ದು, ರಸ್ತೆ ಮುಳುಗಡೆಯಾಗಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.