ADVERTISEMENT

ಕಂಬಾರರಿಗೆ ಅಕಾಡೆಮಿ ಫೆಲೊಶಿಪ್

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

ನವದೆಹಲಿ (ಪಿಟಿಐ):  ಸಾಹಿತಿ ಡಾ. ಚಂದ್ರಶೇಖರ ಕಂಬಾರ, ಸರೋದ್ ಮಾಂತ್ರಿಕ ಅಮ್ಜದ್ ಅಲಿ ಖಾನ್ ಹಾಗೂ ನೃತ್ಯ ಕಲಾವಿದೆ ಪದ್ಮಾ ಸುಬ್ರಹ್ಮಣ್ಯಂ ಸೇರಿದಂತೆ ಸಾಂಸ್ಕೃತಿಕ ಕ್ಷೇತ್ರದ 11 ಗಣ್ಯರು ಸಂಗೀತ ನಾಟಕ ಅಕಾಡೆಮಿ ಫೆಲೊಶಿಪ್‌ಗೆ ಆಯ್ಕೆಯಾಗಿದ್ದಾರೆ.

ಇದೇ 9ರಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಫೆಲೊಶಿಪ್ ಪ್ರದಾನ ಮಾಡಲಿದ್ದಾರೆ. ರೂ 3 ಲಕ್ಷ  ನಗದು ಹಾಗೂ ತಾಮ್ರ ಪತ್ರವನ್ನು ಫೆಲೊಶಿಪ್ ಒಳಗೊಂಡಿದೆ.

ಫೆಲೊಶಿಪ್‌ಗೆ ಆಯ್ಕೆಯಾದ ಗಣ್ಯರು: ಸಂಸ್ಕೃತಿ ಚಿಂತಕ ಮುಕುಂದ್ ಲಾಥ್, ಕೊಳಲು ಮಾಂತ್ರಿಕ ಹರಿಪ್ರಸಾದ್ ಚೌರಾಸಿಯಾ, ಸಂತೂರ್ ವಾದಕ ಶಿವಕುಮಾರ್ ಶರ್ಮ, ಮೃದಂಗ ಪಟು ಉಮಯಾಳಪುರಂ ಕಾಶಿ ವಿಶ್ವನಾಥ ಶಿವರಾಮನ್, ಮೋಹನ್ ಚಂದ್ರಶೇಖರನ್, ನೃತ್ಯಪಟು ರಾಜ್‌ಕುಮಾರ್ ಸಿಂಘಜಿತ್ ಸಿಂಗ್, ಕಥಕ್ಕಳಿ ಕಲಾವಿದ ಕಲಾಮಂಡಲಂ ಗೋಪಿ ಹಾಗೂ ರಂಗಭೂಮಿ ಕಲಾವಿದ ಕನ್ಹಯ್ಯಲಾಲ್.

ಸಂಗೀತ, ನೃತ್ಯ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಒಟ್ಟು 26 ಕಲಾವಿದರು 2011ರ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಲಿದ್ದಾರೆ. ಸಾಂಪ್ರದಾಯಿಕ, ಜಾನಪದ, ಬುಡಕಟ್ಟು ಸಂಗೀತ ಹಾಗೂ ಬೊಂಬೆಯಾಟದಲ್ಲಿ ಅನನ್ಯ ಸಾಧನೆ  ಗುರುತಿಸಿ ಇನ್ನಿತರ 8 ಕಲಾವಿದರಿಗೂ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಪ್ರದರ್ಶನ ಕಲೆಗಳಲ್ಲಿ ಶ್ರೀವತ್ಸ ಗೋಸ್ವಾಮಿ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ರಂಗ ನಿರ್ದೇಶಕ ಅಲಖನಂದನ್ ಹಾಗೂ ಸುಂದರಿ ಕೃಷ್ಣಲಾಲ್ ಶ್ರೀಧರಣಿ ಅವರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.