ನವದೆಹಲಿ: ಪಾಕಿಸ್ತಾನದ ಗಡಿಗುಂಟ ಬಿಎಸ್ಎಫ್ ದಾಳಿ ತೀವ್ರಗೊಳಿಸಿದೆ. ಅಖ್ನೂರ್ ವಲಯದಲ್ಲಿ ಬಿಎಸ್ಎಫ್ ನಡೆಸಿದ ರಾಕೆಟ್ ದಾಳಿಗೆ ಪಾಕಿಸ್ತಾನದ ಬಂಕರ್ ನಾಶವಾಗಿದೆ. ಈ ದಾಳಿಯ ನಂತರ ಜಮ್ಮುವಿನಲ್ಲಿರುವ ಬಿಎಸ್ಎಫ್ ಕೇಂದ್ರಕ್ಕೆ ಕರೆ ಮಾಡಿರುವ ಪಾಕಿಸ್ತಾನ್ ರೇಂಜರ್ಸ್ ಅಧಿಕಾರಿಗಳು ಕದನ ವಿರಾಮಕ್ಕೆ ವಿನಂತಿಸಿದ್ದಾರೆ.
‘ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಪಾಕಿಸ್ತಾನ ನಡೆಸುತ್ತಿದ್ದ ಅಪ್ರಚೋದಿತ ಗುಂಡಿನ ದಾಳಿಗೆ ಬಿಎಸ್ಎಫ್ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಪಾಕಿಸ್ತಾನಕ್ಕೆ ಇದರಿಂದ ತೀವ್ರಹಾನಿಯಾಗಿತ್ತು. ಬೇರೆ ದಾರಿ ಕಾಣದೆ ಅವರು ಕದನ ವಿರಾಮಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂದು ಬಿಎಸ್ಎಫ್ನ ಹಿರಿಯ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
‘ಪಾಕಿಸ್ತಾನವು ಸಾಮಾನ್ಯವಾಗಿ ಪ್ರತಿವರ್ಷ ಬೆಳೆಕೊಯ್ಲು ಮುಗಿದ ನಂತರ ದಾಳಿ ನಡೆಸುತ್ತದೆ. ಭಾರತದ ನೆಲಕ್ಕೆ ಬಾಂಬ್ ಹಾಕಲು ಪಾಕಿಸ್ತಾನವು ಬಳಸುತ್ತಿದ್ದ ಬಂಕರ್ಗಳನ್ನು ಗುರುತಿಸಿದ್ದ ಬಿಎಸ್ಎಫ್ ಕಳೆದ ಮೂರು ದಿನಗಳಿಂದ ನಿರ್ದಿಷ್ಟ ದಾಳಿ ಆರಂಭಿಸಿತ್ತು. ಈ ದಾಳಿಗೆ ಶನಿವಾರ ನಿರೀಕ್ಷಿತ ಫಲಿತಾಂಶ ಸಿಕ್ಕಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.