ಮುಂಬೈ (ಪಿಟಿಐ): ‘ಪತ್ನಿಗೆ ಮನೆಯಿಂದ ಹಣ ಕದಿಯುವ ಚಾಳಿ ಇದೆ. ಅಲ್ಲದೇ ತನ್ನ ಸಹೋದ್ಯೋಗಿಯ ಡೆಬಿಟ್ ಕಾರ್ಡ್ ದುರ್ಬಳಕೆ ಮಾಡಿಕೊಂಡ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಳು. ಈ ರೀತಿ ಮಾನಸಿಕ ಕಿರುಕುಳ ನೀಡುವ ಪತ್ನಿಯ ಜತೆ ಬದುಕುವುದಕ್ಕೆ ಸಾಧ್ಯವಿಲ್ಲ’ ಎಂಬ ಕಾರಣ ನೀಡಿ ವ್ಯಕ್ತಿಯೊಬ್ಬ ಪಡೆದುಕೊಂಡ ವಿಚ್ಛೇದನವನ್ನು ಬಾಂಬೆ ಹೈಕೋರ್ಟ್ ಸಮರ್ಥಿಸಿದೆ.
ಈ ಜೋಡಿ ಮದುವೆಯಾಗಿದ್ದು 1991. ಇವರಿಗೆ ಒಬ್ಬ ಮಗ ಕೂಡ ಇದ್ದಾನೆ. 2008ರಲ್ಲಿ ಪತಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದ.
‘ನನ್ನ ಪತ್ನಿ ಸುಳ್ಳು ಹೇಳುತ್ತಾಳೆ. ನಮ್ಮ ಮನೆಯ ರೀತಿ--– ರಿವಾಜು ಪಾಲಿಸುತ್ತಿಲ್ಲ. ಅನೇಕ ಬಾರಿ ನನ್ನ ದುಡ್ಡು ಕದ್ದಿದ್ದಾಳೆ. ನಕಲಿ ಸಹಿ ಮಾಡಿ ಬೇರೆಯವರ ಬ್ಯಾಂಕ್ ಖಾತೆಯಿಂದ ಹಣ ತೆಗೆದುಕೊಂಡಿದ್ದಾಳೆ. ಸಹೋದ್ಯೋಗಿಯ ಡೆಬಿಟ್್ ಕಾರ್ಡ್್ ದುರ್ಬಳಕೆ ಮಾಡಿಕೊಂಡ ಪ್ರಕರಣದಲ್ಲಿ ಬಂಧನಕ್ಕೂ ಒಳಗಾಗಿದ್ದಳು’ ಎಂದು ದೂರಿದ್ದ.
ಸಾಕ್ಷಿಗಳಿಂದ ಹೇಳಿಕೆ ಪಡೆದುಕೊಂಡ ಬಳಿಕ ಕೌಟುಂಬಿಕ ನ್ಯಾಯಾಲಯವು ಈ ವ್ಯಕ್ತಿಯ ಪರವಾಗಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಪತ್ನಿ ಬಾಂಬೆ ಹೈಕೋರ್ಟ್ಗೆ ಮೇಲ್ಮನವಿಯನ್ನು ಸಲ್ಲಿಸಿದ್ದಳು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿ.ಎಲ್.ಅಚಿಲ್ಯಾ ಹಾಗೂ ವಿಜಯಾ ತಹಿಲ್ರಮಣಿ ಅವರಿದ್ದ ಪೀಠ, ‘ಗಂಡನ ಹಣ ಕದಿಯುವುದು, ಮತ್ತೊಬ್ಬರ ಡೆಬಿಟ್ ಕಾರ್ಡ್ ದುರ್ಬಳಕೆ ಮಾಡಿಕೊಳ್ಳುವುದು... ಇತ್ಯಾದಿ ವರ್ತನೆಗಳನ್ನು ಗಮನಿಸಿದರೆ ಈ ಮಹಿಳೆ ತನ್ನ ಗಂಡನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎನ್ನುವುದು ಖಾತ್ರಿಯಾಗುತ್ತದೆ’ ಎಂದು ಹೇಳಿತು. ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡಿ, ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ಸಮರ್ಥಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.