ADVERTISEMENT

ಕರ್ನಾಟಕ ಪೊಲೀಸರ ನೆರವಿನಿಂದ ಆರೋಪಿಗಳ ಬಂಧನ

ಒಡಿಶಾ ಸಚಿವ ಮಹೇಶ್ವರ ಮೊಹಾಂತಿ ಹತ್ಯೆ ಯತ್ನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:30 IST
Last Updated 1 ಮಾರ್ಚ್ 2014, 19:30 IST

ಭುವನೇಶ್ವರ: ಒಡಿಶಾದ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಮಹೇ­ಶ್ವರ ಮೊಹಾಂತಿ ಅವರ ಹತ್ಯೆ ಯತ್ನದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ, ಆಂಧ್ರಪ್ರದೇಶ ಪೊಲೀ­ಸರ ನೆರವಿ­ನಿಂದ ನಾಲ್ವರು ಆರೋಪಿ­ಗಳನ್ನು ಪುಟ್ಟ­ಪರ್ತಿಯಲ್ಲಿ ಬಂಧಿಸಲಾಗಿದೆ.

ಬಿಜೆಡಿ ಮುಖಂಡರಾದ ಮೊಹಾಂತಿ ಮೇಲೆ ದುಷ್ಕರ್ಮಿ­ಗಳು ಫೆಬ್ರುವರಿ 21ರಂದು ಪುರಿಯಲ್ಲಿ ಗುಂಡಿನ ದಾಳಿ ನಡೆಸಿ ಅವರ ಹತ್ಯೆಗೆ ಯತ್ನಿಸಿದ್ದರು. ಸದ್ಯ ಅವರು ಭುವನೇಶ್ವರದ ಖಾಸಗಿ ಆಸ್ಪತ್ರ­ಯೊಂದ­ರಲ್ಲಿ ಚಿಕಿತ್ಸೆ ಪಡೆ­ಯುತ್ತಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಐವರನ್ನು ಬಂಧಿಸಿದ್ದೇವೆ. ಇವರಲ್ಲಿ ನಾಲ್ವ­ರನ್ನು ಕರ್ನಾಟಕ, ಆಂಧ್ರ ಪೊಲೀಸರ ನೆರವಿನೊಂದಿಗೆ ಪುಟ್ಟಪರ್ತಿ­ಯಲ್ಲಿ ಬಂಧಿಸಲಾಗಿದೆ’ ಎಂದು ಪುರಿಯ ಪೊಲೀಸ್‌ ವರಿಷ್ಠಾಧಿಕಾರಿ ಅನೂಪ್‌ ಕುಮಾರ್‌ ಸಾಹು ತಿಳಿಸಿದ್ದಾರೆ.

‘ಸಚಿವರ ಮೇಲೆ ದಾಳಿ ನಡೆಸಿ ನಾಲ್ವರು ಪುಟ್ಟಪರ್ತಿಗೆ ಪರಾರಿ­ಯಾ­ಗಿ­ದ್ದರು. ಇವರಲ್ಲಿ ಇಬ್ಬರು ಬೆಂಗಳೂರಿಗೆ ಹೋಗಿದ್ದರು. ಇವರು ಬೆಂಗಳೂರಿ­ನಿಂದ ಹಿಂದಿರುಗಿದ ನಂತರ ಪುಟ್ಟಪರ್ತಿಯಲ್ಲಿ ತಂಗಿದ್ದ ರಾಜ್ಯದ ಪೊಲೀಸ್‌ ತಂಡ ನಾಲ್ವರು ಆರೋಪಿ­ಗಳನ್ನು ಬಂಧಿಸಿತು. ಆರೋಪಿಗಳ ಮೊಬೈಲ್‌ ಫೋನ್‌ಗಳ ಮೂಲಕ ನಾವು ಅವರ ಮೇಲೆ ನಿಗಾ ಇಟ್ಟಿದ್ದೆವು’ ಎಂದು ಸಾಹು ಹೇಳಿದ್ದಾರೆ.

‘ಆದರೆ, ದುಷ್ಕೃತ್ಯದ ಸೂತ್ರಧಾ­ರನನ್ನು ಇನ್ನೂ ಬಂಧಿಸಲಾಗಿಲ್ಲ. ಅವನ ಗುರುತು  ಪತ್ತೆಯಾಗಿದ್ದು, ಶೀಘ್ರದಲ್ಲಿ ಆತನನ್ನೂ ಬಂಧಿಸಲಾಗುವುದು’ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.