ADVERTISEMENT

ಕಲಾಂ ಆತ್ಮಚರಿತ್ರೆ ಶೀಘ್ರ ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2012, 19:30 IST
Last Updated 14 ಜೂನ್ 2012, 19:30 IST
ಕಲಾಂ ಆತ್ಮಚರಿತ್ರೆ ಶೀಘ್ರ ಮಾರುಕಟ್ಟೆಗೆ
ಕಲಾಂ ಆತ್ಮಚರಿತ್ರೆ ಶೀಘ್ರ ಮಾರುಕಟ್ಟೆಗೆ   

ನವದೆಹಲಿ (ಪಿಟಿಐ): ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆತ್ಮಚರಿತ್ರೆ `ವಿಂಗ್ಸ್ ಆಫ್ ಫೈರ್~ ಕೃತಿಯ ಎರಡನೇ ಭಾಗ ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳಲಿದೆ.

`ಈ ಕೃತಿಯಲ್ಲಿ 2004ರ ಲೋಕಸಭಾ ಚುನಾವಣೆಯ ನಂತರ ಸೋನಿಯಾ ಗಾಂಧಿ ಅವರೊಂದಿಗೆ ನಡೆದ ಸಭೆಯ ವಿವರ, ಬಿಹಾರ ವಿಧಾನಸಭೆ ವಿಸರ್ಜನೆ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ನಂತರ ಡಾ. ಮನಮೋಹನ್ ಸಿಂಗ್ ಅವರೊಂದಿಗೆ ನಡೆದ ಮಾತುಕತೆ... ಹೀಗೆ ತಾವು ರಾಷ್ಟ್ರಪತಿಯಾಗಿದ್ದಾಗ ನಡೆದ ಪ್ರಮುಖ ಘಟನಾವಳಿಗಳನ್ನು ಕಲಾಂ  ಈ ಪುಸ್ತಕದಲ್ಲಿ ಅಡಕಗೊಳಿಸಿದ್ದಾರೆ.

ಕಲಾಂ ರಾಷ್ಟ್ರಪತಿಯಾಗಿದ್ದಾಗ ನಡೆದ ರಾಜಕೀಯ ಬೆಳವಣಿಗೆಗಳ ತೆರೆಮರೆಯ ಘಟನೆಗಳು ಇದೇ ಮೊದಲ ಬಾರಿ ಬಹಿರಂಗಗೊಳ್ಳುತ್ತಿವೆ. ಸಂಸತ್ತನ್ನು  ಪುನಶ್ಚೇತನಗೊಳಿಸಿ, ಅದಕ್ಕೆ ಮತ್ತಷ್ಟು ಶಕ್ತಿ ತುಂಬುವ ಕುರಿತ ಕಲಾಂ ಅವರ ದೃಷ್ಟಿಕೋನ ಹಾಗೂ ಉಪನ್ಯಾಸಗಳು ಈ ಪುಸ್ತಕದಲ್ಲಿವೆ.

ಕಲಾಂ ತಾವು ರಾಷ್ಟ್ರಪತಿಯಾಗುವ ಸಂದರ್ಭದಲ್ಲಿನ ಘಟನೆಯೊಂದನ್ನು `ಟರ್ನಿಂಗ್ ಪಾಯಿಂಟ್~ ಎಂಬ ಶೀರ್ಷಿಕೆಯಡಿ ಹೀಗೆ ವಿವರಿಸಿದ್ದಾರೆ. 

`ನಾನಾಗ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರನಾಗಿ ಕೆಲವೇ ತಿಂಗಳು ಕಳೆದಿದ್ದವು. ಶಿಕ್ಷಕ ವೃತ್ತಿಯನ್ನು ಬಿಟ್ಟು ಸಂಪುಟ ದರ್ಜೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಸಮಯವದು. ಕೆಲಸ ಮುಗಿಸಿ, ಮನೆಗೆ ಬಂದೆ. ತಕ್ಷಣ ಫೋನ್ ರಿಂಗಾಯಿತು. ರಿಸೀವರ್ ಎತ್ತಿಕೊಂಡೆ. ಆ ಕಡೆಯಿಂದ `ಪ್ರಧಾನ ಮಂತ್ರಿಯವರು ನಿಮ್ಮಂದಿಗೆ ಮಾತನಾಡಬೇಕೆಂತೆ..~ ಎಂಬ ಧ್ವನಿ ಕೇಳಿತು. ದೂರವಾಣಿ ಕರೆಗೆ ಪ್ರತಿಕ್ರಿಯಿಸಿದೆ.

`ಆ ಕರೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರದ್ದಾಗಿತ್ತು. ಆ ಕರೆ ನನ್ನ ಬದುಕಿನಲ್ಲಿ ಅನಿರೀಕ್ಷಿತ ಬದಲಾವಣೆಯನ್ನೇ ತಂದಿತು...~

ಇಂಥದ್ದೊಂದು ಅಪರೂಪದ ಪುಸ್ತಕ ತಿಂಗಳ ಕೊನೆಯಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಪುಸ್ತಕ ಪ್ರಕಾಶನ ಸಂಸ್ಥೆ ಹಾರ್ಪರ್ ಕೊಲಿನ್ಸ್ ಇಂಡಿಯಾ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.