ADVERTISEMENT

ಕಲ್ನಾರಿಗೆ ನಿಷೇಧ: ಸುಪ್ರೀಂ ನಕಾರ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 19:30 IST
Last Updated 21 ಜನವರಿ 2011, 19:30 IST

ನವದೆಹಲಿ (ಪಿಟಿಐ): ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ ಎಂದು ಪರಿಗಣಿಸಲಾಗಿರುವ ಕಲ್ನಾರಿಗೆ ದೇಶದಲ್ಲಿ ನಿಷೇಧ ಹೇರಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ. 
ಆದರೆ, ಕಲ್ನಾರಿನ ಉತ್ಪಾದನೆ ಮತ್ತು ಬಳಕೆಯನ್ನು ನಿಯಂತ್ರಿಸಲು ಆಡಳಿತ ವ್ಯವಸ್ಥೆಯೊಂದನ್ನು ರಚಿಸುವಂತೆ ಕೇಂದ್ರ ಮತ್ತು ರಾಜ್ಯಸರ್ಕಾರಗಳಿಗೆ ಸೂಚಿಸಿದೆ.

ಕಟ್ಟಡಗಳ ನಿರ್ಮಾಣದಲ್ಲಿ ಬಳಸುವ ಕಲ್ನಾರಿನ ಬಳಕೆ ಕುರಿತಂತೆ 1995ರಲ್ಲಿ ಸುಪ್ರೀಂಕೋರ್ಟ್ ನೀಡಿದ ಆದೇಶವನ್ನೇ ಪಾಲಿಸುವಂತೆ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ, ನ್ಯಾಯಮೂರ್ತಿಗಳಾದ ಕೆ.ಎಸ್. ಪಣಿಕ್ಕರ್ ರಾಧಾಕೃಷ್ಣನ್ ಮತ್ತು ಸ್ವತಂತರ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ವಿವಿಧ ರಾಜ್ಯಗಳಿಗೆ ಸೂಚಿಸಿತು.

ಕಲ್ನಾರು ಆರೋಗ್ಯಕ್ಕೆ ಅಪಾಯ ತರುವಂತಹ ವಸ್ತು. ಅದನ್ನು ಬಳಸಿ ತಯಾರಿಸಿದ ಮನೆಗಳಲ್ಲಿ ವಾಸಿಸುವ ಜನರು ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಆಧಾರದ ಮೇಲೆ ದೇಶದಲ್ಲಿ ಕಲ್ನಾರು ಬಳಕೆಗೆ  ನಿಷೇಧ ಹೇರುವಂತೆ ಕೋರಿ ಕಲ್ಯಾಣೇಶ್ವರಿ ಎಂಬ ಸರ್ಕಾರೇತರ ಸಂಸ್ಥೆ 2004ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ತಿರಸ್ಕರಿಸಿ ಈ ತೀರ್ಪು ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.