ನವದೆಹಲಿ (ಪಿಟಿಐ): 2008ರಲ್ಲಿ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಮುಂಬೈನಲ್ಲಿ ನಡೆದ ಭಯೋತ್ಪಾದಕರ ದಾಳಿಯ (26/11) ಸಂಚುಕೋರರಲ್ಲಿ ಪ್ರಮುಖನಾದ ಸಯ್ಯದ್ ಜಬೀಯುದ್ದೀನ್ ಅಲಿಯಾಸ್ ಅಬು ಹಮ್ಜಾನನ್ನು (30) ಬಂಧಿಸಲಾಗಿದೆ.
ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಸಂಘಟನೆಯ ಶಂಕಿತ ಉಗ್ರನಾದ ಈತ, ದಾಳಿಕೋರರಾದ 10 ಉಗ್ರರಿಗೆ ಹಿಂದಿ ಭಾಷೆ ಕಲಿಸಿದ್ದ ಎನ್ನಲಾಗಿದೆ.
ಕೊಲ್ಲಿ ರಾಷ್ಟ್ರ ಸೌದಿ ಅರೇಬಿಯಾದಿಂದ ಭಾರತಕ್ಕೆ ಆಗಮಿಸಿದ ಜಬೀಯುದ್ದೀನ್ನನ್ನು ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೇ 21ರಂದು ಬಂಧಿಸಿ, ಅಂದೇ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ದೆಹಲಿ ನ್ಯಾಯಾಲಯವು ಆರೋಪಿಯನ್ನು 15 ದಿವಸಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಕೊಲ್ಲಿ ರಾಷ್ಟ್ರಗಳಲ್ಲಿ ಮತ್ತು ಪಾಕ್ನಲ್ಲಿ ತಲೆಮರೆಸಿಕೊಂಡಿದ್ದ ಜಬೀಯುದ್ದೀನ್ ವಿರುದ್ಧ ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ಬಳಸಿ ವಿಧ್ವಂಸಕ ಕೃತ್ಯ ಎಸಗಿದ ಗಂಭೀರ ಆರೋಪಗಳಿರುವ ಕಾರಣ ಆತನ ಬಂಧನಕ್ಕೆ ಇಂಟರ್ಪೋಲ್ `ರೆಡ್ ಕಾರ್ನರ್~ ನೋಟಿಸ್ ಜಾರಿ ಮಾಡಿತ್ತು. ಭಾರತದ ಕೋರಿಕೆಯನ್ನು ಮನ್ನಿಸಿದ ಸೌದಿ ಅರೇಬಿಯಾ ಜಬೀಯುದ್ದೀನ್ ಬಂಧಿಸಲು ನೆರವು ನೀಡಿದೆ ಎಂದು ಮೂಲಗಳು ತಿಳಿಸಿವೆ.
ಮುಂಬೈ ಪೊಲೀಸರು ಔರಂಗಾಬಾದ್ನಲ್ಲಿ 2006ರಲ್ಲಿ ಶಸ್ತ್ರಾಸ್ತ್ರ ವಶ ಪಡಿಸಿಕೊಂಡ ಸಂದರ್ಭದಲ್ಲಿ ಜಬೀಯುದ್ದೀನ್ ತಪ್ಪಿಸಿಕೊಂಡಿದ್ದ. ನಂತರ ಈತ ಪಾಕ್ನಲ್ಲಿ ತಲೆ ಮರೆಸಿಕೊಂಡಿದ್ದ ಎನ್ನಲಾಗಿದೆ.
ಮೂಲತಃ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಗೊರಾಯ್ ಪ್ರದೇಶದ ನಿವಾಸಿಯಾದ ಜಬೀಯುದ್ದೀನ್ಗೆ ರಿಯಾಸತ್ ಅಲಿ, ಅಬು ಜುಂದಾಲ್, ಅನ್ಸಾರಿ ಎಂಬ ಹೆಸರುಗಳೂ ಇವೆ.
ಧ್ವನಿ ಮುದ್ರಿಕೆ: ದಾಳಿ ನಡೆಸಿದ 10 ಉಗ್ರರು ಮತ್ತು ಈ ದಾಳಿಗೆ ಪಾಕ್ನಲ್ಲಿ ಸಂಚು ರೂಪಿಸಿದವರ ನಡುವೆ ನಡೆದ ರಹಸ್ಯ ಮಾತುಕತೆಯ ಧ್ವನಿ ಮುದ್ರಿಕೆಯು ಜಬೀಯುದ್ದೀನ್ನಿಂದ ವಶಪಡಿಸಿಕೊಳ್ಳಲಾಗಿದೆ.
`ನಾರಿಮನ್ ಹೌಸ್~ ಮೇಲೆ ದಾಳಿ ನಡೆಸಿದ ಉಗ್ರರ ವಿರುದ್ಧ ಎನ್ಎಸ್ಜಿ ಯೋಧರು ಸೆಣಸುತ್ತಿದ್ದಾಗ, ಪಾಕ್ನಿಂದ ದಾಳಿಕೋರರಿಗೆ ನಿರ್ದೇಶನ ನೀಡಲಾಗುತ್ತಿದ್ದ ಉಗ್ರರ `ನಿಯಂತ್ರಣ ಕೊಠಡಿ~ಯಲ್ಲಿ ಇತರ ಐವರ ಜೊತೆಗೆ ಜಬೀಯುದ್ದೀನ್ ಕೂಡ ಇದ್ದ. ದಾಳಿಕೋರರೊಂದಿಗೆ ಸಂಭಾಷಿಸುತ್ತಿದ್ದ ಎಂದು ಈ ಪ್ರಕರಣದ ತನಿಖಾ ತಂಡದಲ್ಲಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
`ನಾರಿಮನ್ ಹೌಸ್~ ಮೇಲೆ ನಡೆದ ದಾಳಿಯಿಂದ ಉತ್ತೇಜಿತನಾದ ಜಬೀಯುದ್ದೀನ್, `ಇದು ಸಿನಿಮಾದ ಒಂದು ತುಣುಕಷ್ಟೆ; ಪೂರಾ ಸಿನಿಮಾ ಇನ್ನೂ ಬಾಕಿ ಇದೆ ಎಂಬ ಸಂದೇಶವನ್ನು ಮಾಧ್ಯಮಗಳಿಗೆ ರವಾನಿಸಿ~ ಎಂದು ತನ್ನೊಂದಿಗೆ ಇದ್ದವರಿಗೆ ಹೇಳುತ್ತಿದ್ದ ಎಂದೂ ಅವರು ತಿಳಿಸಿದ್ದಾರೆ.
ಧ್ವನಿ ಮುದ್ರಿಕೆಯಲ್ಲಿ ಜಬೀಯುದ್ದೀನ್ ಧ್ವನಿ ಕೂಡ ಇದೆ. ಆತ ಹಿಂದಿಯ `ಪ್ರಶಾಸನ್~ (ಸರ್ಕಾರ) ಎಂಬ ಪದವನ್ನೂ ಬಳಕೆ ಮಾಡಿದ್ದಾನೆ. ದಾಳಿ ನಡೆಸಿದ ಉಗ್ರರಿಗೆ ತಾವು ಪಾಕಿಸ್ತಾನಿಯರು ಎಂಬುದು ಗೊತ್ತಾಗದಂತೆ ಎಚ್ಚರವಹಿಸಲು ಹಾಗೂ ಹೈದರಾಬಾದ್ ಟೊಲಿ ಚೌಕ್ನಿಂದ ಬಂದ `ಡೆಕ್ಕನ್ ಮುಜಾಹಿದ್ದೀನ್~ ಸಂಘಟನೆಗೆ ಸೇರಿದವರೆಂದೂ ತೋರಿಸಿಕೊಳ್ಳುವಂತೆ ಸೂಚನೆಗಳನ್ನು ನೀಡಿದ್ದಾನೆ ಎಂದು ಮೂಲಗಳು ಹೇಳಿವೆ.
ವಿಚಾರಣೆ ಸಂದರ್ಭದಲ್ಲಿ ಜಬೀಯುದ್ದೀನ್ ಮುಂಬೈ ದಾಳಿ ಸಂಚಿನ ಬಗ್ಗೆ ವಿವರ ನೀಡಿದ್ದು, ಅಂದು ಕರಾಚಿಯಿಂದ ದಾಳಿಕೋರರಿಗೆ ನಿರ್ದೇಶನ ನೀಡಲು ಸ್ಥಾಪಿಸಲಾಗಿದ್ದ `ನಿಯಂತ್ರಣ ಕೊಠಡಿ~ ಬಗ್ಗೆಯೂ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಜುಂದಾಲ್ ಹೆಸರು ಹೇಳಿದ್ದ ಕಸಾಬ್: ಮುಂಬೈ ದಾಳಿಯಲ್ಲಿ ಜಬೀಯುದ್ದೀನ್ ಪಾತ್ರ ಇರುವ ಬಗ್ಗೆ ದಾಳಿ ಸಂದರ್ಭದಲ್ಲಿ ಬಂಧಿತನಾದ ಏಕ ಮಾತ್ರ ಉಗ್ರ ಅಜ್ಮಲ್ ಕಸಾಬ್ ಹೇಳಿದ್ದಾನೆ. ನ್ಯಾಯಾಲಯದ ಮುಂದೆ ಹೇಳಿಕೆ ನೀಡಿರುವ ಕಸಾಬ್, `ಅಬು ಜುಂದಾಲ್ ಎಂಬಾತ ಹಿಂದಿ ಮಾತನಾಡುವ ಬಗ್ಗೆ ನಮಗೆ ತರಬೇತಿ ನೀಡಿದ್ದ~ ಎಂದಿದ್ದಾನೆ.
ಜಬೀಯುದ್ದೀನ್ ಹಿನ್ನೆಲೆ: ಬೀಡ್ನ ಭಾರತೀಯ ತಾಂತ್ರಿಕ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿರುವ ಜಬೀಯುದ್ದೀನ್, ಗೋಧ್ರಾ ನಂತರದ ಗಲಭೆಯ ನಂತರ ನಿಷೇಧಿತ ಸಂಘಟನೆಯಾದ `ಸಿಮಿ~ ಸಂಪರ್ಕಕ್ಕೆ ಬಂದ. ಕೆಲವು ದಿವಸಗಳಲ್ಲೇ ಈತ `ಎಲ್ಇಟಿ~ಗೆ ಸೇರಿಕೊಂಡ.
ಕರಾಚಿ ಸುತ್ತಮುತ್ತಲ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಉಗ್ರರು ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳೊಂದಿಗೆ ಸಂಪರ್ಕದಲ್ಲಿದ್ದ ಜಬೀಯುದ್ದೀನ್, ಭಾರತದ ಕರಾವಳಿ ಮತ್ತು ಒಳನಾಡು ಪ್ರದೇಶಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ.
ರಿಯಾಸತ್ ಅಲಿ ಎಂಬ ಹೆಸರಿನಲ್ಲಿ ಪಾಕ್ ಪಾಸ್ಪೋರ್ಟ್ ಹೊಂದಿರುವ ಜಬೀಯುದ್ದೀನ್, ಸೌದಿ ಅರೇಬಿಯಾದಲ್ಲಿಯೂ ಕೆಲವು ಕಾಲ ನೆಲೆಸಿದ್ದ. ಎಲ್ಇಟಿ ಸಂಘಟನೆಗೆ ಯುವಕರನ್ನು ಸೇರ್ಪಡೆ ಮಾಡಿಕೊಳ್ಳುವ ಕಾರ್ಯದಲ್ಲೂ ತೊಡಗಿದ್ದ. ಜಬೀಯುದ್ದೀನ್ ಕೆಲವು ಕಾಲ ಬಾಂಗ್ಲಾದೇಶದಲ್ಲೂ ಇದ್ದ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.