ನವದೆಹಲಿ (ಐಎಎನ್ಎಸ್): ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಸಂಸ್ಥೆಗೆ ~ಬಡ್ಡಿ ರಹಿತ ಸಾಲ~ ನೀಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದ ಮಾನ್ಯತೆಯನ್ನು ರದ್ದು ಪಡಿಸಬೇಕು ಎಂಬುದಾಗಿ ತಾವು ಚುನಾವಣಾ ಆಯೋಗವನ್ನು ಒತ್ತಾಯಿಸುವುದಾಗಿ ಜನತಾ ಪಕ್ಷದ ಮುಖ್ಯಸ್ಥ ಸುಬ್ರಮಣಿಯನ್ ಸ್ವಾಮಿ ಅವರು ಶನಿವಾರ ಇಲ್ಲಿ ಹೇಳಿದರು.
ನ್ಯಾಷನಲ್ ಹೆರಾಲ್ಡ್ ಪ್ರಕಾಶಕರಿಗೆ ತಾನು ಸಾಲ ನೀಡಿರುವುದು ಹೌದು ಎಂಬುದಾಗಿ ಕಾಂಗ್ರೆಸ್ ಪಕ್ಷವು ಒಪ್ಪಿಕೊಂಡ ಒಂದು ದಿನದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಸ್ವಾಮಿ, ~ಕಾಂಗ್ರೆಸ್ ಪಕ್ಷದ ಮಾನ್ಯತೆ ರದ್ದು ಪಡಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ನಾನು ದೂರು ಸಲ್ಲಿಸುತ್ತಿದ್ದೇನೆ~ ಎಂದು ಪ್ರಕಟಿಸಿದರು.
ಸಾಲ ನೀಡಿದ್ದರಿಂದ ತಾನು ಯಾವುದೇ ವಾಣಿಜ್ಯ ಲಾಭ ಗಳಿಸಿಲ್ಲ ಎಂಬುದಾಗಿ ಕಾಂಗ್ರೆಸ್ ಶುಕ್ರವಾರ ತಿಳಿಸಿತ್ತು.
~ವೃತ್ತ ಪತ್ರಿಕೆಯನ್ನು ಮತ್ತೆ ಸುಸ್ಥಿರ ಸ್ಥಿತಿಗೆ ತರುವ ಪ್ರಕ್ರಿಯೆ ಆರಂಭಿಸಲು ನೆರವಾಗುವ ಸಲುವಾಗಿ ದಿ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ ಸಂಸ್ಥೆಯನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್ ತನ್ನ ಕರ್ತವ್ಯ ನಿರ್ವಹಣೆ ಮಾಡಿದೆ~ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಹೇಳಿದ್ದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರ ~ತಪ್ಪು ನಡೆಗಳು~ ದೆಹಲಿಯ ಹೆರಾಲ್ಡ್ ಹೌಸ್ ಮಾರಾಟಕ್ಕೆ ಕಾರಣವಾಯಿತು ಎಂದು ಸ್ವಾಮಿ ಗುರುವಾರ ಆಪಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.