ಚೆನ್ನೈ: ‘ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರದ ಮೇಲೆ ಹೆಚ್ಚಿನ ಒತ್ತಡ ತರಲಾಗುವುದು. ಈ ವಿಷಯವಾಗಿ ಪಕ್ಷದ ಸಂಸದರು ಸಂಸತ್ತಿನಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದು ಎಐಎಡಿಎಂಕೆ ಗುರುವಾರ ತಿಳಿಸಿದೆ.
‘ಕಾವೇರಿ ನೀರು ನಿರ್ವಹಣಾ ಮಂಡಳಿ (ಸಿಡಬ್ಲುಎಮ್ಬಿ) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲುಆರ್ಸಿ) ರಚನೆಗೆ ಸಂಬಂಧಿಸಿದಂತೆ ಸರ್ಕಾರದ ನಿಲುವು ಸ್ಪಷ್ಟವಾಗಿದೆ’ ಎಂದು ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂ ವಿಧಾನಸಭೆಗೆ ತಿಳಿಸಿದ್ದಾರೆ.
‘ಸಿಡಬ್ಲುಎಮ್ಬಿ ಮತ್ತು ಸಿಡಬ್ಲುಆರ್ಸಿ ರಚನೆಗೆ ಈ ತಿಂಗಳ ಅಂತ್ಯದವರೆಗೆ ಕಾಲಾವಕಾಶವಿದೆ. ಈ ಮಂಡಳಿಗಳ ರಚನೆ ಬಳಿಕ ಕೇಂದ್ರದ ನಿಲುವು ಏನು? ಎನ್ನುವುದನ್ನು ತಿಳಿದುಕೊಂಡು ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ. ಈ ಬಗ್ಗೆ ವಿರೋಧ ಪಕ್ಷಗಳ ಸಲಹೆಯನ್ನೂ ಪಡೆಯಲಾಗುವುದು’ ಎಂದಿದ್ದಾರೆ.
ಕಾವೇರಿ ವಿಷಯದ ಬಗ್ಗೆ ಅಧಿವೇಶನದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್, ‘ಟಿಡಿಪಿಯು ಎನ್ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದಂತೆ, ಎಐಎಡಿಎಂಕೆ ಸಹ ಕೇಂದ್ರದ ವಿರುದ್ಧ ವಿಶ್ವಾಸ ಗೊತ್ತುವಳಿ ಮಂಡಿಸಲಿದೆಯೇ’ ಎಂದು ಪ್ರಶ್ನಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.