ಜಮ್ಮು–ಕಾಶ್ಮೀರ: ‘ಇಲ್ಲಿನ ಪುಲ್ವಾಮಾ ಪ್ರದೇಶದಿಂದ ಗುರುವಾರ ಅಪಹರಣಕ್ಕೆ ಒಳಗಾಗಿದ್ದ ಯೋಧ ಔರಂಗಜೇಬ್ರ ಮೃತದೇಹವು ಶುಕ್ರವಾರ ಪತ್ತೆಯಾಗಿದೆ. ತಲೆ ಮತ್ತು ಕತ್ತಿನಲ್ಲಿ ಗುಂಡೇಟಿನ ಗುರುತುಗಳಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಹರಣಕ್ಕೆ ಒಳಗಾದಾಗ ಔರಂಗಜೇಬ್ ರಂಜಾನ್ ಪ್ರಯುಕ್ತ ರಜೆ ತೆಗೆದುಕೊಂಡಿದ್ದರು.
ಅಪಹರಿಸಿದ್ದ ಪ್ರದೇಶದಿಂದ ಸುಮಾರು 10 ಕಿ.ಮೀ. ದೂರದಲ್ಲಿ ಇರುವ ಗುಸ್ಸು ಗ್ರಾಮದಲ್ಲಿ ಮೃತದೇಹ ಬಿದ್ದಿದ್ದನ್ನು ಪೊಲೀಸ್ ಮತ್ತು ಸೇನಾಪಡೆ ಪತ್ತೆ ಹಚ್ಚಿದೆ.
ಸೋಫಿಯಾನಾದ 44 ರಾಷ್ಟ್ರೀಯ ರೈಫಲ್ ಕ್ಯಾಂಪ್ನಲ್ಲಿದ್ದ ಔರಂಗಜೇಬ್ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಶ್ರೀನಗರದಲ್ಲಿ ಹಿರಿಯ ಪತ್ರಕರ್ತ ಹಾಗೂ ರೈಸಿಂಗ್ ಕಾಶ್ಮೀರ್ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಹತ್ಯೆ ನಡೆದ ಕೆಲವೇ ಗಂಟೆಗಳ ಅಂತರದಲ್ಲಿ ಯೋಧರ ಮೃತದೇಹ ಪತ್ತೆಯಾಗಿದೆ.
ಕೇಂದ್ರ ಸರ್ಕಾರ ರಂಜಾನ್ ಪ್ರಯುಕ್ತ ಜಮ್ಮು–ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತಾಗಲು ಸೇನಾ ಕಾರ್ಯಾಚರಣೆಗಳನ್ನು ಕಡಿಮೆಗೊಳಿಸಿತ್ತು. ಈ ಅವಧಿಯಲ್ಲಿಯೇ ರಾಜ್ಯದಲ್ಲಿ ಭಯೋತ್ಪಾದಕ ಮತ್ತು ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ.
ರಜಪೂತ ರೈಫಲ್ಸ್ನಲ್ಲಿದ್ದ ಲೆಫ್ಟಿನೆಂಟ್ ಆಗಿದ್ದ 22 ವರ್ಷದ ಉಮರ್ ಫಯಾಜ್ರನ್ನು ಉಗ್ರರು ಮೇ ತಿಂಗಳಿನಲ್ಲಿ ಅಪಹರಿಸಿ ಕೊಂದಿದ್ದರು. ಉಮರ್ ಹತ್ಯೆಯಾಗುವ ಐದು ತಿಂಗಳ ಹಿಂದೆಯಷ್ಟೇ ಸೇನೆಗೆ ಸೇರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.