ನವದೆಹಲಿ: ಬಿಜೆಪಿ ನಾಯಕ ಹಾಗೂ ಸಂಸದ ಪ್ರಕಾಶ್ ಜಾವಡೇಕರ್ ಸೇರಿದಂತೆ ಆ ಪಕ್ಷದ ಮೂವರು ನಾಯಕರು ಸೋಮವಾರ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ.
ಪತ್ರಕರ್ತರೊಬ್ಬರು ನಡೆಸಿದ ಕುಟುಕು ಕಾರ್ಯಾಚರಣೆ ಸುಳಿಗೆ ಸಂಸದರು ಮತ್ತು ಆರ್ಎಸ್ಎಸ್ ಜೊತೆ ನಿಕಟ ಸಂಪರ್ಕ ಹೊಂದಿದ ಜಾವಡೇಕರ್, ಭೂಪೇಂದ್ರ ಯಾದವ್ ಮತ್ತು ರಾಮ್ ಲಾಲ್ ಅವರು ಬಿದ್ದಿದ್ದಾರೆ.
ನಕಲಿ ಎನ್ಕೌಂಟರ್ ಪ್ರಕರಣದಿಂದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಆಪ್ತ ನರೇಂದ್ರ ಶಹಾ ಅವರನ್ನು ಹೊರತರಲು ಈ ಮೂವರು ಯತ್ನಿಸಿದ್ದರು.
ನಕಲಿ ಎನ್ಕೌಂಟರ್ನಲ್ಲಿ ಬಲಿಯಾದ ತುಳಸಿ ಪ್ರಜಾಪತಿ ಅವರ ತಾಯಿ ನರ್ಮದಾಬಾಯಿ ಅವರ ತಾಯಿಯನ್ನು ಸಂಪರ್ಕಿಸದ ಈ ಮೂವರು ಅವರಿಗೆ ಪರಿಹಾರದ ಆಮಿಷ ಒಡ್ಡಿ `ವಕಾಲತ್ನಾಮಾ'ಕ್ಕೆ ಸಹಿ ಪಡೆಯಲು ಯತ್ನಿಸಿದ್ದರು.
`ವಕಾಲತ್ನಾಮಾ'ಕ್ಕೆ ನರ್ಮದಾಬಾಯಿ ಅವರ ಸಹಿ ಪಡೆದು ತಮಗೆ ಬೇಕಾದ ವಕೀಲರನ್ನು ನೇಮಕ ಮಾಡಲು ಹೊರಟಿದ್ದ ಈ ಮೂವರು ಕಾರ್ಯತಂತ್ರ ಕುಟುಕು ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಿದೆ. ಕುಟುಕು ಕಾರ್ಯಚರಣೆ ನಡೆಸಿದ ಪತ್ರಕರ್ತ ಪುಷ್ಪ್ ಶರ್ಮಾ ಅವರು ಸುಪ್ರೀಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಲು ಬಿಜೆಪಿ ನಿರಾಕರಿಸಿದೆ. ದೇಶದ ಜನರು ಈ ಎಲ್ಲ ಬೆಳವಣಿಗೆಗಳನ್ನು ನೋಡುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.