ADVERTISEMENT

ಕೆಲಸತ್ಯ ನನ್ನೊಟ್ಟಿಗೆ ಸಮಾಧಿ ಆಗಲಿವೆ: ರಾಷ್ಟ್ರಪತಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2016, 13:42 IST
Last Updated 28 ಜನವರಿ 2016, 13:42 IST
ಪುಸ್ತಕ ಬಿಡುಗಡೆಯ ಸಮಾರಂಭದ ನೋಟ
ಪುಸ್ತಕ ಬಿಡುಗಡೆಯ ಸಮಾರಂಭದ ನೋಟ   

ನವದೆಹಲಿ (ಪಿಟಿಐ): ಅಧಿಕಾರದಲ್ಲಿದ್ದ ಅವಧಿಯಲ್ಲಿನ ಕೆಲವು ಸತ್ಯಗಳು ತಮ್ಮೊಂದಿಗೇ ಸಮಾಧಿಯಾಗಲಿವೆ ಎಂದು ಅಗಾಧ ನೆನಪಿನ ಶಕ್ತಿಗೆ ಹೆಸರಾಗಿರುವ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಗುರುವಾರ ತಿಳಿಸಿದ್ದಾರೆ.

‘ಮುಖರ್ಜಿ ನೆನಪುಗಳು’ ಸರಣಿಯ ಎರಡನೇ ಪುಸ್ತಕ ‘ದ ಟ್ರರ್ಬ್ಯುಲೆಂಟ್‌ ಇಯರ್ಸ್:1980–96’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಅತಿ ರಹಸ್ಯ ವಿಷಯಗಳ ಕುರಿತ ತಾನು ಉದ್ದೇಶಪೂರ್ವಕವಾಗಿಯೇ ಈವರೆಗೂ ತುಟಿಬಿಚ್ಚಿಲ್ಲ ಎಂದು ಸ್ಪಷ್ಟ ಪಡಿಸಿದರು.

ADVERTISEMENT

‘ವಿನ್‌ಸ್ಟನ್‌ ಚರ್ಚಿಲ್‌ ಸೇರಿದಂತೆ ಹಲವರು ಸರ್ಕಾರದಲ್ಲಿದ್ದಾಗಿನ ಸತ್ಯಗಳ ಕುರಿತು ಬರೆದಿದ್ದಾರೆ. ಆದರೆ, ಈ ವಿಷಯದಲ್ಲಿ ನನ್ನದು ಮಡಿವಂತ ನಿಲುವು. ಸರ್ಕಾರ ಬಿಡುಗಡೆ ಮಾಡಿದಾಗಲೇ ಜನರಿಗೆ ಸತ್ಯಾಂಶಗಳು ತಿಳಿಯಬೇಕು. ಸರ್ಕಾರದಲ್ಲಿದ್ದ ಯಾವುದೋ ವ್ಯಕ್ತಿಯಿಂದ ಅದು ಜನತೆಗೆ ತಿಳಿಯಬಾರದು’ ಎಂದರು.

ನಿತ್ಯವೂ ಡೈರಿ ಬರೆಯುವ ಹಳೆಯ ಅಭ್ಯಾಸದ ಕುರಿತು ಪ್ರಸ್ತಾಪಿಸಿದ ಮುಖರ್ಜಿ, ಅದರಲ್ಲಿ ಕೆಲವು ಸತ್ಯಗಳಿವೆ ಎಂದರು.

‘ನನ್ನ ಪುತ್ರಿ ಈ ಡೈರಿಯ ಅಭಿರಕ್ಷಕಿ. ಡೈರಿಯನ್ನು ಪ್ರಕಟಿಸದಂತೆ ಅವಳಿಗೆ ಸೂಚಿಸಿರುವೆ. ನೀನು ಬೇಕಾದರೆ, ಅದನ್ನು ಡಿಜಿಟಲೈಸ್‌ ಮಾಡು, ಆದರೆ ಪ್ರಕಟಿಸಬೇಡ. ನೀನು ಡಿಜಿಟಲೈಸ್ ಮಾಡಿದರೆ, ಸರ್ಕಾರವು ತನಗೆ ಸೂಕ್ತ ಎನಿಸಿದಾಗ ಹಾಗೂ ಅಗತ್ಯ ಕಂಡಾಗ ಪ್ರಕಟಿಸುತ್ತದೆ ಎಂದು ಹೇಳಿರುವೆ’ ಎಂದು ತಿಳಿಸಿದರು.

ಇದೇ ವೇಳೆ, ‘ಈ ನಿಲುವಿನ ಕುರಿತು ನಾನು ಕೆಲವು ಬಾರಿ ದ್ವಂದ್ವಕ್ಕೆ ಒಳಗಾಗಿದ್ದೇನೆ. ಆದರೆ, ಅದನ್ನು ಮೆಟ್ಟಿನಿಂತು ಈ ನಿಲುವಿಗೆ ಬದ್ಧವಾಗಿದ್ದೇನೆ. ಕೆಲವು ಸತ್ಯಗಳು ನನ್ನೊಂದಿಗೆ ಸಮಾಧಿಯಾಗಲಿವೆ. ಅವು ಎಂದಿಗೂ ಬಹಿರಂಗಗೊಳ್ಳುವುದಿಲ್ಲ. ಅದಕ್ಕೆ ನಾನು ಬದ್ಧ’ ಎಂದು ಮುಖರ್ಜಿ ಅಚಲವಾಗಿ ನುಡಿದಿದ್ದಾರೆ.

ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಮುಖರ್ಜಿ ಅವರ ಈ ಪುಸ್ತಕವನ್ನು ಬಿಡುಗಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.