ADVERTISEMENT

ಕೇಜ್ರಿವಾಲ್‌ ವಿರುದ್ಧ ಎಫ್‌ಐಆರ್‌

ವಿಮಾನ ನಿಲ್ದಾಣದಲ್ಲಿ ನೂಕುನುಗ್ಗಲು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST
ಕೇಜ್ರಿವಾಲ್‌ ವಿರುದ್ಧ ಎಫ್‌ಐಆರ್‌
ಕೇಜ್ರಿವಾಲ್‌ ವಿರುದ್ಧ ಎಫ್‌ಐಆರ್‌   

ಮುಂಬೈ:  ಚುನಾವಣಾ ಪ್ರಚಾರದ ವೇಳೆ ಇಲ್ಲಿನ ಸಹರಾ ವಿಮಾನ ನಿಲ್ದಾಣದ ಹೊರಗೆ ನೂಕುನುಗ್ಗಲು ಉಂಟಾಗಿದ್ದಕ್ಕೆ ಮುಂಬೈ ಪೊಲೀಸರು ಎಎಪಿ ಮುಖಂಡ ಅರವಿಂದ ಕೇಜ್ರಿ­ವಾಲ್‌ ಹಾಗೂ  ಬೆಂಬಲಿಗರ ವಿರುದ್ಧ ಗುರುವಾರ ಪ್ರಕರಣ ದಾಖಲಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 188 (ಅಧಿಕಾರಿಗಳು ಹೊರಡಿ­ಸಿದ ಆದೇಶ ಉಲ್ಲಂಘನೆ), 141 (ಅಕ್ರಮ­ವಾಗಿ ಗುಂಪು ಸೇರುವಿಕೆ)  ಅಡಿಯಲ್ಲಿ ಸಹರ್‌್ ವಿಮಾನ ನಿಲ್ದಾಣದ ಪೊಲೀಸ್‌್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಿಮಾನ ನಿಲ್ದಾಣದಲ್ಲಿ ಕೇಜ್ರಿವಾಲ್‌ ಅವರನ್ನು ಬರಮಾಡಿ­ಕೊಳ್ಳಲು ನೂರಾರು ಸಂಖ್ಯೆಯಲ್ಲಿ ಬೆಂಬಲಿ­ಗರು ಸೇರಿದ್ದರು. ಇಲ್ಲಿ ಐದಕ್ಕಿಂತ ಹೆಚ್ಚು ಜನರು ಸೇರುವುದಕ್ಕೆ ನಿರ್ಬಂಧವಿದೆ. ಆದರೆ ಎಎಪಿ ಕಾರ್ಯ­ಕರ್ತರು ಇದನ್ನು ಉಲ್ಲಂಘಿಸಿದ್ದಾರೆ’ ಎಂದು ಪೊಲೀಸರು ದೂರಿದರು.

ವಿದರ್ಭ  ರ್‍್ಯಾಲಿಗೆ ಗೈರು: ಅನಾರೋಗ್ಯದ ಕಾರಣ ಕೇಜ್ರಿವಾಲ್‌್ ಅವರು ಗುರುವಾರ ವಿದರ್ಭ ರ್‍್ಯಾಲಿಯಲ್ಲಿ ಭಾಗವಹಿಸಲಿಲ್ಲ. ‘ಮುಂಬೈನಲ್ಲಿ ಬುಧವಾರ ಇಡೀ ದಿನ  ಪ್ರಚಾರ ಮಾಡಿದ್ದರಿಂದ ಅವರ ಆರೋಗ್ಯ ಹದಗೆಟ್ಟಿದೆ. ಅವರು ಆಸ್ತಮಾದಿಂದ ಬಳಲುತ್ತಿದ್ದು, ವೈದ್ಯರು ತಪಾಸಣೆ ಮಾಡುತ್ತಿದ್ದಾರೆ’ ಎಂದು ಎಎಪಿ ವಕ್ತಾರೆ ಪ್ರೀತಿ ಶರ್ಮಾ ಮೆನನ್‌್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘ಮಾಧ್ಯಮಗಳು ಕಾರಣ’ ಪುಣೆ ವರದಿ: ಮುಂಬೈನಲ್ಲಿ ಬುಧವಾರ ಅಂಧೇರಿ ರೈಲು ನಿಲ್ದಾಣ ಹಾಗೂ ಆಟೊ ಪ್ರಯಾಣ ಮಾಡಿ ಪ್ರಚಾರ ನಡೆಸಿದ ವೇಳೆ ಉಂಟಾಗಿದ್ದ ಅವ್ಯವಸ್ಥೆಗೆ ಮಾಧ್ಯಮಗಳೇ ಕಾರಣ ಎಂದು  ಕೇಜ್ರಿವಾಲ್‌ ದೂರಿದ್ದಾರೆ. ಇದೇ ವೇಳೆ  ತಮ್ಮ ಚುನಾವಣಾ ಪ್ರಚಾರ ಸೋಗಲಾಡಿತನ ಎಂಬ ಆರೋಪವನ್ನು ತಳ್ಳಿ ಹಾಕಿದ್ದಾರೆ.

ರೈಲಿನಲ್ಲಿ ಎಎಪಿ ಮುಖಂಡರು ಪ್ರಯಾಣಿಸಿದ್ದರಿಂದ ಸಾಮಾನ್ಯ ಪ್ರಯಾ ಣಿಕರಿಗೆ ತೊಂದರೆಯಾಗಿದೆ ಎಂಬುದು ಸುಳ್ಳು. ರೈಲಿನಲ್ಲಿ ಉಂಟಾದ ದೊಡ್ಡ ನಾಟಕಕ್ಕೆ ಮಾಧ್ಯಮವೇ ಜವಾಬ್ದಾರಿ ಎಂದು ತಿರುಗೇಟು ನೀಡಿದ್ದಾರೆ.

ಸ್ಥಳೀಯ ರೈಲಿನಲ್ಲಿ ಪ್ರಯಾಣಿಸಿ­ದಾಗ  ಉಂಟಾದ ತೊಂದರೆ ಬಗ್ಗೆ ಪ್ರಯಾಣಿಕರನ್ನು ಮಾಧ್ಯಮ­ದವರು ಪ್ರಶ್ನಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಅವ್ಯವಸ್ಥೆ ಸೃಷ್ಟಿಸಿ­ರಲಿಲ್ಲ. ಸಾಮಾನ್ಯ ಜನ ನನ್ನ ಪ್ರಯಾಣದಿಂದ ಖುಷಿಗೊಂಡಿ­ದ್ದಾರೆ ಎಂದು ಕೇಜ್ರಿವಾಲ್‌್ ಮರಾಠಿ ವಾಹಿನಿ­ಯೊಂದಕ್ಕೆ ತಿಳಿಸಿದ್ದಾರೆ.

ಆಟೊದಲ್ಲಿ ಪ್ರಯಾಣಿಸಿದ್ದು ಪ್ರಚಾರದ ನಾಟಕ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಎಎಪಿ ಮುಖಂಡ, ನಾನು ಯಾವಾಗಲೂ ಎಲ್ಲ ರೀತಿಯ ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿ­ಸುತ್ತೇನೆ ಎಂದು ಹೇಳಿದರು.  ಮಾಧ್ಯ­ಮಕ್ಕೆ ಹಣ ನೀಡಿ ಬಿಜೆಪಿ
ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಹೆಚ್ಚು ಬಿಂಬಿಸುವಂತೆ ಮಾಡ ಲಾಗಿದೆ ಎಂಬುದನ್ನು ಪುನರುಚ್ಚರಿಸಿ­ದರು.

ಸ್ಪಷ್ಟನೆ: ‘ಬಿಎಸ್‌ಪಿ ನಾಯಕಿ ಮಾಯಾವತಿ ಅವರಿಗಿಂತ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಲು  ಸೂಕ್ತ ಅಭ್ಯರ್ಥಿ ಎಂದು ನಾನು ಹೇಳಿರಲೇ ಇಲ್ಲ’ ಎಂದು  ಕೇಜ್ರಿವಾಲ್‌ ಗುರುವಾರ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.