ನವದೆಹಲಿ (ಐಎಎನ್ಎಸ್): ಬೆಲೆ ಏರಿಕೆ ಮತ್ತು ಭ್ರಷ್ಟಾಚಾರ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೈಚೆಲ್ಲಿದ್ದಾರಲ್ಲದೆ, ಆಹಾರ ಮತ್ತು ರಸಗೊಬ್ಬರಕ್ಕೆ ನೀಡುವ ಸಬ್ಸಿಡಿಗಳನ್ನು ಎತ್ತಿ ಹೇಳುವ ಮೂಲಕ 2 ಜಿ ತರಂಗಾಂತರ ಹಂಚಿಕೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಆಕ್ಷೇಪಿಸಿದ್ದಾರೆ.
ಪ್ರಧಾನಿ ಅವರು ಮಾಧ್ಯಮದೊಂದಿಗೆ ನಡೆಸಿದ ಮಾತುಕತೆ ಕುರಿತು ಪ್ರತಿಕ್ರಿಯಿಸಿದ ಅವರು ‘ರಾಷ್ಟ್ರದ ಸಂಪತ್ತನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುವ ಮೂಲಕ ಕಾರ್ಪೊರೇಟ್ ವಲಯವನ್ನು ಸಬ್ಸಿಡಿಗೆ ಒಳಪಡಿಸಿದಂತಾಗಿದೆ. ಶ್ರೀಮಂತರಿಗೆ ಸಬ್ಸಿಡಿ ನೀಡುವುದನ್ನು ಪಕ್ಷ ಸಮ್ಮತಿಸುವುದಿಲ್ಲ’ ಎಂದು ಯೆಚೂರಿ ಅಭಿಪ್ರಾಯಪಟ್ಟರು.
ಅಸಹಾಯಕ ವರ್ತನೆ: ಬಿಜೆಪಿ
ನವದೆಹಲಿ (ಪಿಟಿಐ): ಭ್ರಷ್ಟಾಚಾರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಅವರು ಅಸಹಾಯಕತನವನ್ನು ಪ್ರದರ್ಶಿಸಿದ್ದಾರೆ ಎಂದು ದೂರಿದ ಬಿಜೆಪಿ, 2 ಜಿ ತರಂಗಾಂತರ ಹಂಚಿಕೆ, ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ಆದರ್ಶ್ ಹೌಸಿಂಗ್ ಹಗರಣಗಳನ್ನು ಮರೆಮಾಚಲು ಪ್ರಧಾನಿ ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವಲ್ಲಿ ಪ್ರಧಾನಿ ಸಮರ್ಥರಲ್ಲ ಎಂಬಂತೆ ಕಂಡು ಬರುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ತಿಳಿಸಿದರು. ಆದರೆ ಎಲ್ಲಾ ಹಗರಣಗಳಿಗೆ ಮಾಧ್ಯಮಗಳು ಮತ್ತು ವಿರೋಧಪಕ್ಷಗಳೇ ಕಾರಣ ಎಂದು ಪ್ರಧಾನಿ ಅವರು ಆರೋಪಿಸುತ್ತಿರುವುದು ವಿಷಾದಕರ ಎಂದು ಗಡ್ಕರಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.