
ಗುವಾಹಟಿ (ಐಎಎನ್ಎಸ್): ಶಂಕಿತ ಉಗ್ರರು ಗುಂಡಿಕ್ಕಿ ಓರ್ವನನ್ನು ಹತ್ಯೆಮಾಡಿದ ಹಾಗೂ ಎರಡು ಪ್ರತ್ಯೇಕ ಇರಿತದ ಘಟನೆಗಳಿಂದ ಅಸ್ಸಾಂನ ಬೋಡೊಲ್ಯಾಂಡ್ ಪ್ರಾಂತ್ಯದ ಕೊಕ್ರಝಾರ್ ಜಿಲ್ಲೆಯಲ್ಲಿ ಗುರುವಾರ ಮತ್ತೆ ಹಿಂಸಾಚಾರ ಉಲ್ಭಣಿಸಿದ್ದು, ಮುಂಜಾಗ್ರತೆ ಕ್ರಮವಾಗಿ ಜಿಲ್ಲಾಡಳಿತವು ಅನಿರ್ದಿಷ್ಟಾವಧಿ ಕರ್ಫ್ಯೂ ಜಾರಿಗೊಳಿಸಿದೆ.
ಪ್ರಕರಣದ ಗಂಭೀರತೆ ಅರಿತು ಕೊಕ್ರಝಾರ್ಗೆ ಬುಧವಾರ ರಾತ್ರಿಯೇ ಒಂದು ಸೇನಾ ತುಕಡಿ ಕರೆಯಿಸಲಾಗಿದ್ದು, ಜಿಲ್ಲೆಯಲ್ಲಿರುವ ಎಲ್ಲ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಗುರುವಾರ ಬೆಳಿಗ್ಗೆ ಸೈನಿಕರು ಪಂಥಸಂಚಲನ ನಡೆಸಿದರು.
ಪ್ರಕರಣವೊಂದರಲ್ಲಿ ಶಂಕಿತ ಉಗ್ರರು ಕೊಕ್ರಝಾರ್ನಲ್ಲಿ ಅಬ್ದುಲ್ ಕಲಾಂ ಎಂಬಾತನಿಗೆ ಇರಿದಿದ್ದು, ಮತ್ತೊಂದೆಡೆ ಗೊಸಾಯಿಗಾಂವ್ ಉಪವಿಭಾಗದ ತೆಲಿಪರಾ ಎಂಬಲ್ಲಿ ಉಗ್ರರು ಓರ್ವನಿಗೆ ಇರಿದು, ನಿರಿಸಾನ್ ಬಸುಮತಾರಿ ಎಂಬಾತನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಕೊಕ್ರ್ಝಾರ್, ಚಿರಾಂಗ್ ಸೇರಿದಂತೆ ಬೋಡೊ ಬುಡಕಟ್ಟು ಪ್ರಾಬಲ್ಯವಿರುವ ನಾಲ್ಕು ಜಿಲ್ಲೆಗಳಲ್ಲಿ ಕೆಲ ತಿಂಗಳ ಹಿಂದಷ್ಟೇ ಬೋಡೊಗಳು ಹಾಗೂ ಬಾಂಗ್ಲಾದೇಶದಿಂದ ವಲಸೆ ಬಂದ ಬಂಗಾಳಿ ಭಾಷಿಕ ಮುಸ್ಲಿಮರ ನಡುವೆ ಹೊತ್ತಿಕೊಂಡಿದ್ದ ಜನಾಂಗೀಯ ಕಲಹಕ್ಕೆ 100ಕ್ಕೂ ಅಧಿಕ ಜನರು ಬಲಿಯಾಗಿ, ಲಕ್ಷಾಂತರು ಜನರು ನಿರಾಶ್ರಿತರಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.