ADVERTISEMENT

ಕೊರತೆ ಕಲ್ಲಿದ್ದಲು ಪೂರೈಕೆ ಭರವಸೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 19:30 IST
Last Updated 13 ಅಕ್ಟೋಬರ್ 2011, 19:30 IST

ನವದೆಹಲಿ: ರಾಯಚೂರಿನ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕೊರತೆಯಾಗಿರುವ ಕಲ್ಲಿದ್ದಲನ್ನು ತಕ್ಷಣ ಪೂರೈಕೆ ಮಾಡುವುದಾಗಿ ಭರವಸೆ ನೀಡಿರುವ  ಕೇಂದ್ರ ಸರ್ಕಾರ, ಹೆಚ್ಚುವರಿ ಮತ್ತು  ಹೊಸ ಯೋಜನೆಗಳಿಗೆ ಅಗತ್ಯವಿರುವ ಕಲ್ಲಿದ್ದಲು ಗಣಿಗಳನ್ನು ~ಇ- ಹರಾಜು~ ಪ್ರಕ್ರಿಯೆಯಲ್ಲಿ ಭಾಗವಹಿಸಿ ಪಡೆದುಕೊಳ್ಳುವಂತೆ ಸೂಚಿಸಿದೆ.

ಕಲ್ಲಿದ್ದಲು ಸಮಸ್ಯೆಯಿಂದಾಗಿ ರಾಯಚೂರಿನ ಉಷ್ಣ ವಿದ್ಯುತ್ ಸ್ಥಾವರಗಳು ಉತ್ಪಾದನೆ ಸ್ಥಗಿತಗೊಳಿಸಿರುವುದು ಕೇಂದ್ರದ ಗಮನಕ್ಕೆ ಬಂದಿದ್ದು ಇನ್ನು ತಡ ಮಾಡದೆ ಕಡಿಮೆ ಆಗಿರುವ ಕಲ್ಲಿದ್ದಲು ಪೂರೈಕೆ ಮಾಡಲಾಗುವುದು ಎಂದು ಕಲ್ಲಿದ್ದಲು ಖಾತೆ ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಗುರುವಾರ ಭರವಸೆ ನೀಡಿದರು.

~ರಾಜ್ಯದ ವಿದ್ಯುತ್ ಸಮಸ್ಯೆಯನ್ನು ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ತಮ್ಮ ಗಮನಕ್ಕೆ ತಂದಿದ್ದಾರೆ. ಕಲ್ಲಿದ್ದಲು ಸಮಸ್ಯೆಯಿಂದಾಗಿ ರಾಯಚೂರು ವಿದ್ಯುತ್ ಉತ್ಪಾದನಾ ಘಟಕಗಳು ಉತ್ಪಾದನೆ ಸ್ಥಗಿತಗೊಳಿಸಿರುವುದಾಗಿ ವಿವರಿಸಿದ್ದಾರೆ. ಬೆಳಿಗ್ಗೆ ನಾವಿಬ್ಬರೂ ಮಾತುಕತೆ ನಡೆಸಿದ್ದೇವೆ~ ಎಂದು ಶ್ರೀಪ್ರಕಾಶ್ ಜೈಸ್ವಾಲ್ ವಿದ್ಯುತ್ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ತಿಳಿಸಿದರು.

~ಡಬ್ಲ್ಯುಸಿಎಲ್~ ಹಾಗೂ `ಎಂಸಿಎಲ್~ ಗಣಿ ಕಂಪೆನಿ ಮೂಲಕ ರಾಜ್ಯಕ್ಕೆ ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆ ಮಾಡಲು ಕ್ರಮ  ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವರು ಭರವಸೆ ನೀಡಿದರು. ಇವೆರಡು ಗಣಿಗಳಿಂದ ಬರುವ ಕಲ್ಲಿದ್ದಲು ಪ್ರಮಾಣವನ್ನು 13  ಸಾವಿರ ಟನ್‌ನಷ್ಟು ಹೆಚ್ಚಳ ಮಾಡುವಂತೆ ಸಚಿವರು ಕೇಳಿಕೊಂಡರು. ಇದಕ್ಕೆ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. 

 `ಕಲ್ಲಿದ್ದಲು ಹೊತ್ತು ಬರುವ ಗೂಡ್ಸ್ ರೈಲುಗಳಿಗೆ ತೆಲಂಗಾಣ ಚಳವಳಿ ಬಿಸಿ ತಟ್ಟದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು~ ಎಂಬ ಶೋಭಾ ಅವರ ಮನವಿಗೆ ಸಚಿವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ. `ಗೂಡ್ಸ್ ಗಾಡಿಗಳಿಗೆ ಕಲ್ಲಿದ್ದಲು ತುಂಬುವುದು ನಮ್ಮ ಕೆಲಸ. ರೈಲುಗಳಿಗೆ ಅಡೆತಡೆ ಆಗದಂತೆ ನೋಡಿಕೊಳ್ಳುವುದು ನಮ್ಮಹೊಣೆ ಅಲ್ಲ. ಈ ವಿಷಯ ಕುರಿತು ರೈಲ್ವೆ ಸಚಿವರೊಂದಿಗೆ ಮಾತನಾಡಿ~ ಎಂದು ಜೈಸ್ವಾಲ್ ಸಲಹೆ ಮಾಡಿದರು.

ಕಲ್ಲಿದ್ದಲು ಕೊರತೆಯಿಂದ ರಾಯಚೂರಿನ ಎಂಟು ವಿದ್ಯುತ್ ಘಟಕಗಳಲ್ಲಿ ಐದು ಮಾತ್ರ ಕೆಲಸ ಮಾಡುತ್ತಿದೆ. ಮೂರು ಘಟಕಗಳು ಬಂದ್ ಆಗಿವೆ. ಸಿಂಗರೇಣಿ ಗಣಿಯಿಂದ ಬರುತ್ತಿರುವ ಕಲ್ಲಿದ್ದಲು ಪ್ರಮಾಣ ಏಪ್ರಿಲ್‌ನಿಂದ ಗಣನೀಯವಾಗಿ ಇಳಿದಿದೆ. ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 14.5ಲಕ್ಷ ಟನ್ ಬರಬೇಕಿತ್ತು. ಪೂರೈಕೆ ಆಗಿರುವುದು ಕೇವಲ 8.87ಲಕ್ಷ ಟನ್ ಎಂದು ಶೋಭಾ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.