ADVERTISEMENT

ಕೊರಾಪುಟ್ ಬುಡಕಟ್ಟು ಸಮುದಾಯಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಭುವನೇಶ್ವರ: ದೇಶದ ಕೃಷಿ ಪರಂಪರೆ ರಕ್ಷಣೆಯಲ್ಲಿ ಮಾಡಿದ ಅನನ್ಯ ಸಾಧನೆಗಾಗಿ ಕೊರಾಪುಟ್ ಜಿಲ್ಲೆಯ ಬುಡಕಟ್ಟು ವಾಸಿಗಳಾದ ಮದುಲಿ ಹಾಗೂ ಚಂದ್ರ ಮೋಹನ್ ಅವರಿಗೆ ಪ್ರಧಾನಿ ಮನಮೋಹನ್ ಸಿಂಗ್ ಮಂಗಳವಾರ ಪ್ರಶಸ್ತಿ ಪ್ರದಾನ ಮಾಡಿದರು.

ಇಲ್ಲಿ ನಡೆಯುತ್ತಿರುವ ವಿಜ್ಞಾನ ಸಮಾವೇಶದಲ್ಲಿ ಅವರಿಬ್ಬರೂ ಪ್ರಧಾನಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದು ಮಾತ್ರವಲ್ಲ; ಮೂವರು ನೊಬೆಲ್ ಪ್ರಶಸ್ತಿ ಪುರಸ್ಕೃತರ ಜತೆ ವೇದಿಕೆ ಹಂಚಿಕೊಂಡಿದ್ದು ವಿಶೇಷವಾಗಿತ್ತು. 

ಕೊರಾಪುಟ್ ಬುಡಕಟ್ಟು ವಾಸಿಗಳು ಕೃಷಿ ಪರಂಪರೆಯನ್ನು ಉಳಿಸಲು ಅಳವಡಿಸಿಕೊಂಡ ವಿಧಾನವನ್ನು ವಿಶ್ವ ಸಂಸ್ಥೆಯ ಆಹಾರ ಹಾಗೂ ಕೃಷಿ ಸಂಸ್ಥೆಯು ಗುರುತಿಸಿದ್ದರ ಫಲಶ್ರುತಿಯಾಗಿ ಈ ಪ್ರಶಸ್ತಿ ನೀಡಲಾಗಿದೆ.

ಕೊರಾಪುಟ್ ಸಸ್ಯ ಹಾಗೂ ಜೀವವೈವಿಧ್ಯಕ್ಕೆ ಮಾತ್ರವಲ್ಲ; ಭತ್ತ ಬೆಳೆಯುವ ಪ್ರಮುಖ ಸ್ಥಳ ಎಂದೂ ಗುರುತಿಸಿಕೊಂಡಿದೆ. ಬೇರೆಲ್ಲೂ ಕಾಣಸಿಗದ 79 ಬಗೆಯ ಹೂ ಬಿಡುವ ಸಸ್ಯಗಳು ಹಾಗೂ ಹಣ್ಣಿನ ಗಿಡಗಳಿಂದಾಗಿ ಇಲ್ಲಿನ ಪ್ರಾದೇಶಿಕ ತಳಿ ವೈವಿಧ್ಯ ಮಹತ್ವ ಪಡೆದುಕೊಂಡಿದೆ.

ನೈಸರ್ಗಿಕ ಒತ್ತಡದಿಂದಾಗಿ ಇಲ್ಲಿನ ಸಾಂಪ್ರದಾಯಿಕ ಕೃಷಿ ಪದ್ಧತಿ ಬದಲಾಗ್ದ್ದಿದರೂ, ವಿಶಿಷ್ಟ ತಳಿಗಳ ರಕ್ಷಣೆಗೆ ಬುಡಕಟ್ಟು ಜನರು ಟೊಂಕಕಟ್ಟಿ ನಿಂತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.