ADVERTISEMENT

ಕೋಮು ಹಿಂಸೆ ತಡೆ ಮಸೂದೆ ಇಂದು ಮಂಡನೆ?

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ): ಸಾಕಷ್ಟು ವಿಳಂಬದ ನಂತರ ಕೋಮು ಹಿಂಸೆ ತಡೆ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

ಮಸೂದೆಯಿಂದ ಕೆಲವು ಅಂಶಗಳನ್ನು ತೆಗೆದು ಹಾಕಲಾಗಿದೆ. ಕಾನೂನಿನ ಪಾತ್ರ­ವನ್ನು ಗಲಭೆ ನಿಯಂತ್ರಣಕ್ಕೆ ಸೀಮಿತ­ಗೊಳಿಸಲಾಗಿದೆ. ಗಲಭೆಯಲ್ಲಿ ತೊಡಗುವ ಸಮುದಾಯಗಳ ಬಗ್ಗೆ ಕಾನೂನು ತಟಸ್ಥ ಧೋರಣೆ ತಾಳಲಿದೆ.

  ಪ್ರತಿಪಕ್ಷ ಬಿಜೆಪಿ ಮತ್ತು ಇತರ ಕೆಲವು ಪಕ್ಷಗಳಿಂದ ತೀವ್ರ ವಿರೋಧಕ್ಕೆ ಒಳಗಾಗಿ­ರುವ ಮಸೂದೆ ಮಂಗಳವಾರ ಸಂಸತ್ತಿ­ನಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. ಆರಂಭದಲ್ಲಿ ಗಲಭೆಯ ಹೊಣೆಯನ್ನು ಬಹುಸಂಖ್ಯಾತ ಸಮುದಾಯದ ಮೇಲೆ ಹೊರಿಸುವಂತೆ ಮಸೂದೆ ರಚಿಸಲಾ­ಗಿತ್ತು. ಆದರೆ ಬಿಜೆಪಿ ಮತ್ತು ಇತರ ಕೆಲವು ಪಕ್ಷಗಳ ತೀವ್ರ ವಿರೋಧದಿಂ­ದಾಗಿ ಈ ಅಂಶವನ್ನು ತಿದ್ದುಪಡಿ ಮಾಡ­ಲಾ­ಗಿದ್ದು, ಈಗ ಮಸೂದೆ ಕೋಮು ತಟಸ್ಥ ಧೋರಣೆ ಹೊಂದಿದೆ.

ಪರಿಷ್ಕೃತ ಮಸೂದೆಯಲ್ಲಿ, ಗಲಭೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಧ್ಯ ಪ್ರವೇಶದ ಅಧಿಕಾರವನ್ನು ಕೂಡ ಮೊಟಕುಗೊಳಿಸಲಾಗಿದೆ. ಪ್ರಸ್ತುತ ಮಸೂದೆ ಪ್ರಕಾರ, ರಾಜ್ಯ ಸರ್ಕಾರ ಬೇಡಿಕೆ ಮುಂದಿಟ್ಟರೆ ಮಾತ್ರ ಗಲಭೆ ನಿಯಂತ್ರಣಕ್ಕೆ ರಕ್ಷಣಾ ಪಡೆಗಳನ್ನು ನಿಯೋಜಿಸುವ ಅಧಿಕಾರ ಕೇಂದ್ರಕ್ಕೆ ದೊರೆಯುತ್ತದೆ.
ಬಿಜೆಪಿ, ಪಶ್ಚಿಮ ಬಂಗಾಳ ಮುಖ್ಯ­ಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಜಯ­ಲಲಿತಾ ವಿರೋಧದ ಹಿನ್ನೆಲೆಯಲ್ಲಿ ಮಸೂದೆಗೆ ತಿದ್ದುಪಡಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.