ADVERTISEMENT

ಖಾಸಗಿ ಬದುಕಿನಲ್ಲಿ ಹಸ್ತಕ್ಷೇಪ ಸಚಿವ ಖುರ್ಷಿದ್ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 19:30 IST
Last Updated 24 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಸಾರ್ವಜನಿಕ ಹಾಗೂ ಖಾಸಗಿ ಬದುಕುಗಳ ನಡುವಿನ ವ್ಯತ್ಯಾಸವನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

ಸಿ.ಡಿ ವಿವಾದದ ಹಿನ್ನೆಲೆಯಲ್ಲಿ ಸಿಲುಕಿರುವ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರಿಂದ ಪ್ರತಿಪಕ್ಷ ಬಿಜೆಪಿ ವಿವರಣೆ ಬಯಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಅವರು ಹೀಗೆ ಹೇಳಿದ್ದಾರೆ.

ಸಾರ್ವಜನಿಕ ಕಾರ್ಯವೈಖರಿ, ಸಾರ್ವಜನಿಕ ಆಡಳಿತದ ಬಗ್ಗೆ ಪ್ರಶ್ನೆಗಳನ್ನು ಕೇಳಬೇಕು. ಆದರೆ ವ್ಯಕ್ತಿಯ ಖಾಸಗಿ ಬದುಕಿನ ವಿಷಯಕ್ಕೆ ಬಂದಾಗಲೂ ಇದೇ ರೀತಿ ಆಗಬಾರದು. ಮಾಧ್ಯಮದವರನ್ನು ಒಳಗೊಂಡಂತೆ ಪ್ರತಿಯೊಬ್ಬರೂ ಈ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು ಎಂದರು.

ಸಿಂಘ್ವಿ ಅವರ ಸಿ.ಡಿ ವಿವಾದದ ಬಗ್ಗೆ ಬಿಜೆಪಿಯು ಸಂಸತ್ತಿನಲ್ಲಿ ದನಿ ಎತ್ತುವುದು ಸಮರ್ಥನೀಯವಲ್ಲ. ಸಂಸತ್ತಿಗೆ ತನ್ನದೇ ಆದ ಚೌಕಟ್ಟು ಇದ್ದು, ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಅಲ್ಲಿ ಪ್ರಸ್ತಾಪಿಸಬೇಕು ಎಂದು ಖುರ್ಷಿದ್ ಅಭಿಪ್ರಾಯಪಟ್ಟರು.

ಆಗ ಅವರಿಗೆ, ಕರ್ನಾಟಕ ವಿಧಾನಸಭೆಯಲ್ಲಿ ಕೆಲವು ಶಾಸಕರು ಮೊಬೈಲ್‌ನಲ್ಲಿ ಅಶ್ಲೀಲ ದೃಶ್ಯ ವೀಕ್ಷಿಸಿದಾಗ ಕಾಂಗ್ರೆಸ್ ಆ ಬಗ್ಗೆ ದನಿ ಎತ್ತಿದ್ದು ಸರಿಯೇ ಎಂಬ ಪ್ರಶ್ನೆ ಎದುರಾಯಿತು.

ಇದನ್ನು ಸಮರ್ಥಿಸಿಕೊಂಡ ಖುರ್ಷಿದ್, `ಶಾಸನಸಭೆಯಲ್ಲಿ ಕುಳಿತು ಅಶ್ಲೀಲ ದೃಶ್ಯ ನೋಡುವುದು ಖಾಸಗಿ ಬದುಕಿನ ವ್ಯಾಪ್ತಿಗೆ ಬರುವುದಿಲ್ಲ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.