ADVERTISEMENT

ಖುದ್ದು ಹಾಜರಿಗೆ ಸುಪ್ರೀಂ ಆದೇಶ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 19:30 IST
Last Updated 19 ಅಕ್ಟೋಬರ್ 2011, 19:30 IST

ನವದೆಹಲಿ: ~ಆದಾಯ ಮೀರಿ ಆಸ್ತಿ ಹೊಂದಿರುವ ಆರೋಪದ ವಿಚಾರಣೆಗೆ ಬೆಂಗಳೂರು ಕೋರ್ಟ್‌ಗೆ ಗುರುವಾರ ಖುದ್ದು ಹಾಜರಾಗುವಂತೆ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ಸ್ಪಷ್ಟವಾಗಿ ಸೂಚಿಸಿದೆ.

ತಮಿಳುನಾಡು ಮುಖ್ಯಮಂತ್ರಿಗೆ ಸೂಕ್ತ ಭದ್ರತೆ ಒದಗಿಸುವುದಾಗಿ ಕರ್ನಾಟಕ ಭರವಸೆ ನೀಡಿದ ನಂತರ ಕೋರ್ಟ್ ಈ ಸೂಚನೆ ನೀಡಿತು. ನ್ಯಾಯಾಲಯದ ಆದೇಶದಿಂದಾಗಿ ಜಯಲಲಿತಾ ಗುರುವಾರ ಕೋರ್ಟ್‌ಗೆ  ಹಾಜರಾಗುವುದು ಅನಿವಾರ್ಯವಾಗಿದೆ.

 ತಮಗೆ ಸೂಕ್ತ ಭದ್ರತೆ ಒದಗಿಸಲು ಕರ್ನಾಟಕಕ್ಕೆ ಸಾಧ್ಯವಿಲ್ಲದ್ದರಿಂದ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಜಯಲಲಿತಾ ಮಾಡಿದ ಮನವಿಯನ್ನು ನ್ಯಾ. ದಲ್ವೀರ್ ಭಂಡಾರಿ ಹಾಗೂ ನ್ಯಾ. ದೀಪಕ್ ಮಿಶ್ರ ಅವರನ್ನು ಒಳಗೊಂಡ ನ್ಯಾಯಪೀಠ ತಿರಸ್ಕರಿಸಿತು.

ಜಯಲಲಿತಾ ಅವರ ವಕೀಲ ಮುಕುಲ್ ರೋಹಟಗಿ ತಮ್ಮ ಕಕ್ಷಿಗಾರರ ಸುರಕ್ಷತೆ ಕುರಿತು ನ್ಯಾಯಾಲಯದಲ್ಲಿ ಆತಂಕ ವ್ಯಕ್ತಪಡಿಸಿದರು. ವಿಚಾರಣಾ ಕೋರ್ಟ್ ವಿಮಾನ ನಿಲ್ದಾಣದಿಂದ 65 ಕಿ.ಮೀ. ದೂರದಲ್ಲಿರುವುದರಿಂದ ಜಯಲಲಿತಾ ಅವರ ಸುರಕ್ಷತೆ ಸಮಸ್ಯೆ ಹುಟ್ಟುಹಾಕಿದೆ ಎಂದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪೀಠ. `ಸಾರ್ವಜನಿಕ ವ್ಯಕ್ತಿಯಾಗಿರುವ ನೀವು ಜನರಿಂದ ಹೇಗೆ ದೂರ ಉಳಿಯುತ್ತೀರಿ?~ ಎಂದು ಕೇಳಿತು. ವಿಚಾರಣೆ ಸ್ಥಳವನ್ನಾದರೂ ವಿಮಾನ ನಿಲ್ದಾಣದ ಸಮೀಪಕ್ಕೆ ಸ್ಥಳಾಂತರಿಸಬೇಕು ಎಂಬ ಜಯಲಲಿತಾ ಮನವಿಗೂ ನ್ಯಾಯಾಲಯ ಕಿವಿಗೊಡಲಿಲ್ಲ. `ನಿಮ್ಮ ಅನುಕೂಲಕ್ಕಾಗಿ ಹೆಲಿಪ್ಯಾಡ್ ನಿರ್ಮಿಸಿದ ಮೇಲೆ ಮತ್ತೇನು ಬೇಕು?~. ವಿಚಾರಣೆ ಮುಗಿಸಿ ವಾಪಸ್ ಹೋಗಿ ಎಂದು ಹೇಳಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.