ADVERTISEMENT

ಗಂಡನಿಂದ ಗಂಗೆಯ ಪಾಲಾದರೂ ಬದುಕುಳಿದ ಹೆಂಡತಿ!

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 8:45 IST
Last Updated 24 ಸೆಪ್ಟೆಂಬರ್ 2011, 8:45 IST

ಪಾಟ್ನ(ಐಎಎನ್‌ಎಸ್): ಬಿಡುಗಡೆ ಬಯಸಿದ ಗಂಡ, ಹೆಂಡತಿಗೆ ಈಜು ಬಾರದೆಂಬ ನಂಬಿಕೆಯಿಂದ ಆಕೆಯನ್ನು ಆಳದ  ಗಂಗಾ ನದಿ ನೀರಿಗೆ ತಳ್ಳಿ ಪೌರುಷ ಮೆರೆದರೆ, ಬಾಲ್ಯದಲ್ಲೇ ಈಜು ಕಲಿತಿದ್ದ ಆಕೆ ಧೃತಿಗಡೆದೆ ಸತತ 12 ಗಂಟೆಗಳ ಕಾಲ ಈಜಿ ದಡ ಸೇರಿದ ಅಪರೂಪದ ಘಟನೆ ಬಿಹಾರದಿಂದ ವರದಿಯಾಗಿದೆ.

~ನನ್ನ ಪತಿ ಸೇತುವೆ ಮೇಲಿನಿಂದ ನನ್ನನ್ನು ನೀರಿಗೆ ತಳ್ಳಿದಾಗ ನಾನು ಗಂಗೆಯ ಪಾಲಾಗುವೆ ಎಂದು ಅಂದುಕೊಂಡಿದ್ದ. ಅವನಿಗೆ ನನಗೆ ಈಜು ಬರುವುದು ಗೊತ್ತಿರಲಿಲ್ಲವೆನಿಸುತ್ತದೆ. ನಾನು ಸತತ 12 ಗಂಟೆಗಳ ಕಾಲ ಈಜಿ ದಡ ಸೇರಿದೆ~ ಎಂದು  20ರ ಹರೆಯದ ಅಮೃತಾ ಕುಮಾರಿ ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾಳೆ.

ಪತಿ ಆದರ್ಶ ಕುಮಾರ ಬುಧವಾರ ತಡ ರಾತ್ರಿ ಪತ್ನಿ ಅಮೃತಾ ಕುಮಾರಿಯೊಂದಿಗೆ ಇಲ್ಲಿನ ಮಹಾತ್ಮಾ ಗಾಂಧಿ ಸೇತು ಹೆಸರಿನ ಸೇತುವೆಯ ಮೇಲೆ ಕರೆದುಕೊಂಡು ಹೋಗಿದ್ದ. ಅಲ್ಲಿ ತನ್ನ ಪತಿ ತನ್ನನ್ನು ನೀರಿಗೆ ತಳ್ಳಿದ್ದ ಎಂದು ಅಮೃತಾ ಕುಮಾರಿ ಪೊಲೀಸರಿಗೆ ತಿಳಿಸಿದ್ದಾಳೆ.

ADVERTISEMENT

~ದಡವನ್ನು ಮುಟ್ಟಲು ನದಿಯ ಮಧ್ಯದಲ್ಲಿ ಸುಮಾರು 12 ಗಂಟೆಗಳ ಕಾಲ ಈಜಿದೆ. ಇನ್ನೇನು ಕೈ ಕಾಲು ಸೋತು ಮೂರ್ಛೇ ಹೋಗುವವಳಿದ್ದೆ, ಅಷ್ಟರಲ್ಲಿ ನದಿಯಲ್ಲಿನ ಪ್ರವಾಹ ನನ್ನನ್ನು ದಡಕ್ಕೆ ತಳ್ಳಿತು. ಹೀಗಾಗಿ ನಾನು ಬದುಕಿದೆ~ ಎಂದು ಅವಳು  ಹೇಳಿಕೊಂಡಿದ್ದಾಳೆ.

ಇಲ್ಲಿಂದ 60 ಕಿ.ಮೀ ದೂರದ ಸಮುಷ್ಟಿಪುರ ಜಿಲ್ಲೆಯ ರಾಸಲಪುರ ಗ್ರಾಮದಲ್ಲಿ ನದಿಯ ದಡದಲ್ಲಿ ಮೂರ್ಛೆಹೋಗಿ ಬಿದ್ದಿದ್ದ ಅಮೃತ ಕುಮಾರಿಯನ್ನು ನೋಡಿದ ಮೀನುಗಾರರು ಹಾಗೂ ಗ್ರಾಮಸ್ಥರು ವಿಷಯವನ್ನು ಪೊಲೀಸರ ಗಮನಕ್ಕೆ ತಂದರು.

ಈಗ ಪೊಲೀಸರು ಅಮೃತ ಕುಮಾರಿಯ ಪತಿ ಆದರ್ಶ ಕುಮಾರನ ಕುಟುಂಬದ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಅಂತರ್ಜಾತಿಯ ವಿವಾಹಕ್ಕೆ ಹುಡುಗನ ತಂದೆ ತಾಯಿಗಳ ವಿರೋಧವಿದ್ದುದೇ ಇದಕ್ಕೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

 ಔರಂಗಾಬಾದ್ ಜಿಲ್ಲೆಯ ನಿವಾಸಿಯಾಗಿದ್ದ ಅಮೃತ ಕುಮಾರಿ ಅಮೃತಸರದಲ್ಲಿ ಜೊತೆಗೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿನ  ಆದರ್ಶ ಕುಮಾರನ ಪರಿಚಯ  ಮುಂದೆ ಪ್ರೇಮಕ್ಕೆ ತಿರುಗಿ ಅವರಿಬ್ಬರೂ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು ಎಂದು ಹೇಳಲಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.