ನವದೆಹಲಿ, (ಪಿಟಿಐ/ಐಎಎನ್ಎಸ್): ಗಣರಾಜ್ಯೋತ್ಸವದ ಮುನ್ನಾ ದಿನವಾದ ಬುಧವಾರ 19 ಜನ ಮಹಿಳೆಯರು ಸೇರಿದಂತೆ 109 ಗಣ್ಯ ಸಾಧಕರಿಗೆ ಪದ್ಮ ಪ್ರಶಸ್ತಿ ಘೋಷಿಸಲಾಗಿದೆ.
ಐವರು ಗಣ್ಯರಿಗೆ ಪದ್ಮ ವಿಭೂಷಣ, 27 ಗಣ್ಯರಿಗೆ ಪದ್ಮ ಭೂಷಣ ಮತ್ತು 77 ಮಂದಿ ಗಣ್ಯರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಪದ್ಮ ವಿಭೂಷಣ: ಶಿಲ್ಪಿ ಕೆ.ಜಿ. ಸುಬ್ರಮಣಿಯನ್, ಡಾಕ್ಟರ್ ಕಾಂತಿಲಾಲ್ ಹಸ್ತಿಮಲ್ ಸಂಚೇತಿ, ಆಡಳಿತಗಾರ ಟಿ.ವಿ . ರಾಜೇಶ್ವರ್ , ಈಚೆಗೆ ನಿಧನರಾದ ಖ್ಯಾತ ವ್ಯಂಗ್ಯ ಚಿತ್ರಕಾರ ಗೋವೆಯ ಮಾರಿಯೊ ಮಿರಾಂಡ್ ಮತ್ತು ಖ್ಯಾತ ಸಂಗೀತಗಾರ ಭೂಪೆನ್ ಹಜಾರಿಕಾ ಅವರನ್ನು ಪದ್ಮ ವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪದ್ಮ ಭೂಷಣ: ಸಿನಿಮಾ ವಿಭಾಗದಲ್ಲಿ ಹಿರಿಯ ಸಿನಿಮಾ ನಟ ಧರ್ಮೇಂದ್ರ, ನಟಿ ಶಬನಾ ಆಜ್ಮಿ ಮತ್ತು ಅಂತರ್ ರಾಷ್ಟ್ರೀಯ ಖ್ಯಾತಿಯ ಸಿನಿಮಾ ನಿರ್ಮಾಪಕಿ ಮೀರಾ ನಾಯರ್ ವೈದ್ಯಕೀಯ ವಿಭಾಗದಲ್ಲಿ ಕರ್ನಾಟಕದ ಡಾ ದೇವಿ ಪ್ರಸಾದ್ ಶೆಟ್ಟಿ ಅವರನ್ನು ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪದ್ಮಶ್ರೀ: ಹಾಡುಗಾರ ಅನುಪ್ ಜಲೋಟಾ, ಕೈಗಾರಿಕೋದ್ಯಮಿ ಸ್ವಾತಿ ಪೆರುಮಾಳ್, ನಿಸರ್ಗ ಪ್ರೇಮಿ ಉಲ್ಲಾಸ್ ಕಾರಂತ್, ಹಾಕಿ ತಂಡದ ಮಾಜಿ ನಾಯಕ ಜಾಫರ್ ಇಕ್ಬಾಲ್, ಮಹಿಳಾ ಕ್ರಿಕೆಟ್ ತಂಡದ ನಾಯಕಿ ಜುಲನ್ ಗೋಸ್ವಾಮಿ ಮತ್ತು ಬಾಣದ ಗುರಿಕಾರ ಲಿಂಬಾ ರಾಮ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.