
ಭೋಪಾಲ್ (ಐಎಎನ್ಎಸ್): ಅಕ್ರಮವಾಗಿ ಕಲ್ಲುಗಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಅನ್ನು ತಡೆಯಲು ಹೋದ ಯುವ ಐಪಿಎಸ್ ಅಧಿಕಾರಿಯೊಬ್ಬರ ಮೇಲೆ ಅದೇ ಟ್ರ್ಯಾಕ್ಟರ್ ಹರಿಸಿ ಕೊಂದು ಹಾಕಿರುವ ದುರ್ಘಟನೆ, ಮಧ್ಯ ಪ್ರದೇಶದ ಮೊರೇನ ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಕಲ್ಲು ಗಣಿ ಮಾಫಿಯಾ ಈ ಘಟನೆಯ ಹಿಂದಿದೆ ಎಂದು ಶಂಕಿಸಲಾಗಿದೆ.
`ಬನ್ಮೋರ್ ಪಟ್ಟಣದಲ್ಲಿ ಉಪ ವಿಭಾಗೀಯ ಪೊಲೀಸ್ ಅಧಿಕಾರಿಯಾಗಿದ್ದ 30 ವರ್ಷದ ನರೇಂದ್ರ ಕುಮಾರ್ ಸಿಂಗ್ ತಮ್ಮ ಅಧಿಕೃತ ಜೀಪ್ನಲ್ಲಿ ಗಸ್ತು ತಿರುಗುತ್ತಿದ್ದರು. ಆಗ ಕಲ್ಲು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಅವರ ಕಣ್ಣಿಗೆ ಬಿತ್ತು. ಕೂಡಲೇ ಅದನ್ನು ಹಿಂಬಾಲಿಸಿ ಅದಕ್ಕಿಂತ ಮುಂದೆ ಹೋದ ಅವರು ವಾಹನ ನಿಲ್ಲಿಸುವಂತೆ ಸೂಚಿಸಿದರು. ಆದರೂ ಚಾಲಕ ನಿಲ್ಲಿಸಲಿಲ್ಲ. ಆಗ ವಾಹನದ ಮುಂದೆ ಹೋಗಿ ನಿಂತ ಅಧಿಕಾರಿ, ಅದನ್ನು ನಿಲ್ಲಿಸಲು ಯತ್ನಿಸಿದರು. ಇದನ್ನು ಕಂಡ ಚಾಲಕ ಟ್ರ್ಯಾಕ್ಟರ್ ಅನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಅವರ ಮೇಲೇ ಹರಿಸಿಕೊಂಡು ಹೋದ. ಕೂಡಲೇ ನರೇಂದ್ರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗದಲ್ಲಿ ಅವರು ಮೃತರಾದರು~ ಎಂದು ಉಪ ಪೊಲೀಸ್ ಮಹಾನಿರ್ದೇಶಕ ಡಿ.ಪಿ.ಗುಪ್ತ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
2009ನೇ ಸಾಲಿನ ಐಪಿಎಸ್ ಅಧಿಕಾರಿಯಾದ ನರೇಂದ್ರ, ಪ್ರೊಬೇಷನ್ ಅವಧಿಯಲ್ಲಿದ್ದರು. ಅವರ ಪತ್ನಿ ಮಧುರಾಣಿ ತೆವಾಟಿಯ ಗ್ವಾಲಿಯರ್ನಲ್ಲಿ ಐಪಿಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಹೆರಿಗೆ ರಜೆಯ ಮೇಲೆ ದೆಹಲಿಗೆ ತೆರಳಿದ್ದಾರೆ. ಟ್ರ್ಯಾಕ್ಟರ್ ಚಾಲಕ ಮನೋಜ್ ಗುರ್ಜರ್ನನ್ನು ಬಂಧಿಸಲಾಗಿದೆ.
ಒಂದು ತಿಂಗಳ ಹಿಂದಷ್ಟೇ ಬನ್ಮೋರ್ಗೆ ನಿಯೋಜಿತರಾಗಿದ್ದ ನರೇಂದ್ರ ಇಷ್ಟು ಕ್ಷಿಪ್ರ ಅವಧಿಯಲ್ಲೇ, ಈ ಪ್ರದೇಶದಲ್ಲಿ ವ್ಯಾಪಕವಾಗಿರುವ ಗಣಿ ಮಾಫಿಯಾವನ್ನು ಮಟ್ಟ ಹಾಕಲು ಯತ್ನಿಸಿದ್ದರು. ಇಂತಹ ಕೃತ್ಯದಲ್ಲಿ ತೊಡಗಿದ್ದ ಹಲವಾರು ಲಾರಿಗಳು ಮತ್ತು ಟ್ರ್ಯಾಕ್ಟರ್ಗಳನ್ನು ವಶಪಡಿಸಿಕೊಂಡಿದ್ದರು.
ರಾಜ್ಯದ ಗೃಹ ಸಚಿವ ಉಮಾಶಂಕರ್ ಗುಪ್ತ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕ ನಂದನ್ ದುಬೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.