ರಾಯಪುರ: ಮಹಾತ್ಮ ಗಾಂಧಿ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ‘ಚತುರ ವರ್ತಕ’ (ಚತುರ ಬನಿಯ) ಎಂದು ಕರೆದಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಅಮಿತ್ ಷಾ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ.
ರಾಯಪುರದಲ್ಲಿ ಶುಕ್ರವಾರ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ್ದ ಅಮಿತ್ ಷಾ, ‘ಕಾಂಗ್ರೆಸ್ ತತ್ವ, ಸಿದ್ಧಾಂತಗಳಿಂದ ಹುಟ್ಟಿದ ಪಕ್ಷವಲ್ಲ. ದೇಶದ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ ಒಂದು ಅಸ್ತ್ರವಾಗಿತ್ತಷ್ಟೆ. ಚತುರ ವರ್ತಕರಂತಿದ್ದ ಗಾಂಧಿ ಅವರಿಗೆ ಮುಂದೇನಾಗುತ್ತದೆ ಎಂಬುದು ತಿಳಿದಿತ್ತು. ಹೀಗಾಗಿ ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ ಉಳಿಯಬಾರದೆಂದು ಗಾಂಧಿ ಹೇಳಿದ್ದರು’ ಎಂದು ತಿಳಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲ, ‘ಈ ಹೇಳಿಕೆಯ ಮೂಲಕ ಷಾ ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಅಪಮಾನ ಮಾಡಿದ್ದಾರೆ. ಜಾತಿಯ ವಿರುದ್ಧ ಹೋರಾಡುವ ಬದಲು ಬಿಜೆಪಿ ಜಾತಿಯನ್ನು ಎತ್ತಿ ಮಾತನಾಡುತ್ತಿದೆ. ಗಾಂಧೀಜಿ ಅವರ ಜಾತಿಯ ಆಧಾರದಲ್ಲಿ ಅಮಿತ್ ಷಾ ಈ ಹೇಳಿಕೆ ನೀಡಿದ್ದಾರೆ. ದೇಶದ ಆಡಳಿತ ಪಕ್ಷದ ಸಿದ್ಧಾಂತ ಮತ್ತು ಅದರ ಅಧ್ಯಕ್ಷರ ಮನಸ್ಥಿತಿಯನ್ನು ಈ ಹೇಳಿಕೆ ತೋರುತ್ತದೆ. ಇಂಥ ಜನ ದೇಶವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಾರೋ ಗೊತ್ತಿಲ್ಲ’ ಎಂದಿದ್ದಾರೆ.
‘ಈ ಹೇಳಿಕೆಗಾಗಿ ಅಮಿತ್ ಷಾ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನರ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸದಸ್ಯರ ಕ್ಷಮೆ ಕೋರಬೇಕು’ ಎಂದು ರಂದೀಪ್ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.