ರೋಹ್ಟಕ್: ಕಾಲೇಜು ವಿದ್ಯಾರ್ಥಿಯೋರ್ವ ನಡೆಸಿದ ಗುಂಡಿನ ದಾಳಿಯಿಂದಾಗಿ ಪ್ರಾಧ್ಯಾಪಕರೊಬ್ಬರು ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.
ಇಲ್ಲಿನ ಸೋನೆಪತ್ ಹತ್ತಿರದ ಪಿಪ್ಲಿ ಹಳ್ಳಿಯಲ್ಲಿರುವ ಶಾಹೀದ್ ದಲ್ಜೀರ್ ಸಿಂಗ್ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಕಾರಣ ತಿಳಿದುಬಂದಿಲ್ಲ.
‘ಉಪನ್ಯಾಸಕ ರಾಜೇಂದರ್ ಸಿಂಗ್ ಅವರು ಕೊಠಡಿಯಲ್ಲಿ ಕುಳಿತಿದ್ದ ವೇಳೆ ಬಂದ ವಿದ್ಯಾರ್ಥಿ ನಾಲ್ಕು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆ ಬೆಳಿಗ್ಗೆ 8.30 – 9.00ರ ವೇಳೆಗೆ ನಡೆದಿದ್ದು, ತನಿಖೆ ಪ್ರಗತಿಯಲ್ಲಿದೆ. ಕೊಲೆ ಹಿಂದಿರುವ ನಿಕರ ಕಾರಣ ಹಾಗೂ ಆರೋಪಿಯನ್ನು ಕೂಡಲೇ ಪತ್ತೆಹಚ್ಚಲಾಗುವುದು’ ಎಂದು ಖರ್ಖೋಡಾ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ವೀರೇಂದರ್ ಸಿಂಗ್ ತಿಳಿಸಿದ್ದಾರೆ.
ಆಂಗ್ಲ ಭಾಷೆ ಪ್ರಾಧ್ಯಾಪಕರಾಗಿದ್ದ ಸಂತ್ರಸ್ತ ರಾಜೇಂದರ್ ಸಿಂಗ್ ಅವರನ್ನು ತಕ್ಷಣ ಆಸ್ಟತ್ರೆಗೆ ದಾಖಲಿಸಲಾಯಿತಾದರೂ ಮೃತಪಟ್ಟಿದ್ದಾರೆ.
‘ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದ ಆರೋಪಿ ದಾಳಿ ನಡೆಸಿ ತಕ್ಷಣ ಅಲ್ಲಿಂದ ಪರಾರಿಯಾದ. ನೋಡಲು ವಿದ್ಯಾರ್ಥಿಯಂತಿದ್ದ ಆತ, ನಮ್ಮ ಕಾಲೇಜಿನವನೇ ಎಂದು ಖಚಿತವಾಗಿ ಹೇಳಲು ಸಾಧ್ಯವಾಗುತ್ತಿಲ್ಲ’ ಎಂದು ಘಟನೆ ವೇಳೆ ಕಾಲೇಜಿನಲ್ಲಿದ್ದ ಇನ್ನೊಬ್ಬ ಪ್ರಾಧ್ಯಾಪಕ ಹೇಳಿದ್ದಾರೆ.
ಹರಿಯಾಣದ ಯಮುನಾನಗರದಲ್ಲಿನ ಖಾಸಗಿ ಶಾಲೆಯೊಂದರಲ್ಲಿ 12 ನೇ ತರಗತಿ ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರ ಮೇಲೆ ಗುಂಡು ಹಾರಿಸಿದ್ದ. ಅಧ್ಯಯನದಲ್ಲಿ ಕಳಪೆ ಸಾಧನೆ ತೋರಿದ್ದ ಕಾರಣಕ್ಕೆ ಸಹಪಾಠಿಗಳೆದುರು ಪ್ರಾಂಶುಪಾಲರು ತನ್ನನ್ನು ನಿಂದಿಸಿದ್ದರು ಎಂದು ಆ ವಿದ್ಯಾರ್ಥಿ ದೂರಿದ್ದ. ಈ ಘಟನೆ ನಡೆದ ಕೆಲವೇ ವಾರಗಳ ಅಂತರದಲ್ಲಿ ಮತ್ತೊಂದು ಘಟನೆ ಬೆಳಕಿಗೆ ಬಂದಿರುವುದು ಆತಂಕ ಮೂಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.