ADVERTISEMENT

ಗುಜರಾತ್ ಮಾದರಿ: ಪವಾರ್ ಪ್ರಶಂಸೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2010, 12:50 IST
Last Updated 19 ಡಿಸೆಂಬರ್ 2010, 12:50 IST

ಪುಣೆ (ಪಿಟಿಐ): ಗುಜರಾತಿನ ಅಭಿವೃದ್ಧಿ ಮಾದರಿಯನ್ನು ಕೊಂಡಾಡಿರುವ ಕೇಂದ್ರ ಕೃಷಿ ಸಚಿವ ಶರದ್ ಪವಾರ್, ರಾಜ್ಯವನ್ನು ಮುನ್ನಡೆಸಲು ಅಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷ ಮತ್ತು ಮಾಧ್ಯಮಗಳು ಜತೆಗೂಡುತ್ತಿವೆ ಎಂದು ಹೇಳಿದ್ದಾರೆ.

‘ಅಭಿವೃದ್ಧಿಯ ವಿಚಾರ ಬಂದಾಗ ಗುಜರಾತ್‌ನಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷ ಮತ್ತು ಮಾಧ್ಯಮಗಳು ಕೈಜೋಡಿಸಿ ರಾಜ್ಯಕ್ಕೆ ಹಲವು ಯೋಜನೆಗಳು ಬರುವಂತೆ ನೋಡಿಕೊಳ್ಳುತ್ತವೆ. ಇದು ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಏಕೆ ನಡೆಯುವುದಿಲ್ಲ’ ಎಂದು ಅವರು ಶುಕ್ರವಾರ ರಾತ್ರಿ ಇಲ್ಲಿ ಪತ್ರಕರ್ತರೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತಿದ್ದಾಗ ಪ್ರಶ್ನಿಸಿದರು.

ಜೈತಾಪುರ ಅಣು ವಿದ್ಯುತ್ ಸ್ಥಾವರಕ್ಕೆ ಎದುರಾಗಿರುವ ವಿರೋಧದ ಬಗ್ಗೆ ಪ್ರತಿಕ್ರಿಯಿಸುತ್ತಾ ಪವಾರ್ ಈ ಮಾತನ್ನು ಆಡಿದರು. ಎನ್ರಾನ್ ಯೋಜನೆ ಆರಂಭವಾಗುವಾಗಲೂ ಕೊಂಕಣ ಭಾಗದಲ್ಲಿ ತೋಟಗಾರಿಕೆಗೆ ತೊಂದರೆ ಆಗುತ್ತದೆ ಎಂಬ ವಿರೋಧ ಕೇಳಿಬಂದಿತ್ತು. ಆದರೆ ಅಂತದ್ದೇನೂ ಆಗಲಿಲ್ಲ. ಮಹಾರಾಷ್ಟ್ರ ವಿದ್ಯುತ್ ಕೊರತೆ ಎದುರಿಸುತ್ತಿದೆ. ಪ್ರತಿಯೊಂದು ಯೋಜನೆಗೂ ವಿರೋಧ ಮಾಡುತ್ತಿದ್ದರೆ  ಅಭಿವೃದ್ಧಿ ಹೊಂದುವುದಾದರೂ ಹೇಗೆ ಎಂದು ಅವರು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.