ನವದೆಹಲಿ: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ‘ಉತ್ತಮ ಆಡಳಿತದ ಕಾರ್ಯಸೂಚಿ’ಗೆ ಬೆಂಬಲಿಸಿದ ಮೇಘಾಲಯ, ತ್ರಿಪುರಾ, ನಾಗಾಲ್ಯಾಂಡ್ ರಾಜ್ಯಗಳ ಜನರಿಗೆ ಅಭಿನಂದನೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ನರೇಂದ್ರ ಮೋದಿ, ‘ಈಶಾನ್ಯ ರಾಜ್ಯದ ಜನರ ಕನಸುಗಳು ಮತ್ತು ಆಕಾಂಕ್ಷೆಯನ್ನು ಈಡೇರಿಸಲು ಪಕ್ಷ ಬದ್ಧವಾಗಿದೆ’ ಎಂದು ಹೇಳಿದ್ದಾರೆ.
ಮೇಘಾಲಯ, ನಾಗಾಲ್ಯಾಂಡ್, ಮತ್ತು ತ್ರಿಪುರಾ ಜನರು ಮಾತನಾಡುತ್ತಾರೆ! ಎಂದಿರುವ ಅವರು, ಉತ್ತಮ ಆಡಳಿತ ಕಾರ್ಯಸೂಚಿ ಹಾಗೂ 'ಆಕ್ಟ್ ಈಸ್ಟ್ ಪಾಲಿಸಿ'ಯನ್ನು ಹೊಂದಿರುವ ಬಿಜೆಪಿ ಮತ್ತು ಮಿತ್ರಪಕ್ಷಗಳನ್ನು ಬೆಂಬಲಿಸಿದ ಈ ರಾಜ್ಯಗಳ ಜನರಿಗೆ ಧನ್ಯವಾದ ಹೇಳುತ್ತೇನೆ. ಜನರ ಕನಸು ಮತ್ತು ಆಕಾಂಕ್ಷೆಗಳನ್ನು ನೆರವೇರಿಸುವಲ್ಲಿ ನಾವು ಶ್ರಮಿಸುತ್ತೇವೆ’ ಎಂದು ಪ್ರಧಾನಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.
2018ರ ತ್ರಿಪುರಾ ಚುನಾವಣೆಯನ್ನು ಒಂದು ಯುಗವಾಗಿ ಪರಿಗಣಿಸಲಾಗುವುದು! ಎಂದಿರುವ ಅವರು, ತ್ರಿಪುರದ ನನ್ನ ಸಹೋದರಿಯರು ಮತ್ತು ಸಹೋದರರು ಮಾಡಿರುವ ಸಾಧನೆ ಅಸಾಮಾನ್ಯವಾಗಿದೆ. ಬಿಜೆಪಿಗೆ ನೀಡಿರುವ ಅಸಾಧಾರಣ ಬೆಂಬಲಕ್ಕಾಗಿ ಅವರಿಗೆ ಧನ್ಯವಾದ ಹೇಳಲು ಯಾವುದೇ ಪದಗಳಿಲ್ಲ. ತ್ರಿಪುರಾವನ್ನು ಪರಿವರ್ತಿಸುವಲ್ಲಿ ಇದೊಂದು ಮೈಲಿಗಲ್ಲು ಎಂದಿದ್ದಾರೆ.
‘ತ್ರಿಪುರದಲ್ಲಿನ ಐತಿಹಾಸಿಕ ಗೆಲುವು ಅತ್ಯಂತ ಸೈದ್ಧಾಂತಿಕವಾದದ್ದು. ಇದು ವಿವೇಚನಾರಹಿತ ಶಕ್ತಿ ಮತ್ತು ಬೆದರಿಕೆಯ ವಿರುದ್ಧ ಪ್ರಜಾಪ್ರಭುತ್ವಕ್ಕೆ ಸಂದ ಗೆಲುವು. ಇಂದು ಶಾಂತಿ ಮತ್ತು ಅಹಿಂಸೆಯು ಭಯದ ವಾತಾವರಣದ ವಿರುದ್ಧ ಮೇಲುಗೈ ಸಾಧಿಸಿದೆ. ತ್ರಿಪುರಾದಲ್ಲಿ ಉತ್ತಮ ರಾಜ್ಯ ಸರ್ಕಾರವನ್ನು ನಾವು ನೀಡುತ್ತೇವೆ‘ ಎಂದು ಮೋದಿ ಭವರಸೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.