ADVERTISEMENT

ಚಿತ್ರ ಕಲಾವಿದೆ ಮನೆ ಮೇಲೆ ಕಲ್ಲು ತೂರಾಟ, ಜೀಪ್‌ ಜಖಂ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 19:30 IST
Last Updated 20 ಏಪ್ರಿಲ್ 2018, 19:30 IST
ದುರ್ಗಾ ಮಾಲತಿ
ದುರ್ಗಾ ಮಾಲತಿ   

ತಿರುವನಂತಪುರ/ಪಾಲಕ್ಕಾಡ್‌: ಕಠುವಾದಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ಚಿತ್ರ ಕಲಾವಿದೆ ದುರ್ಗಾ ಮಾಲತಿ ಅವರು ರಚಿಸಿರುವ ಎರಡು ಕಲಾಕೃತಿಗಳು ವಿವಾದಕ್ಕೀಡಾಗಿವೆ.

ಈ ಕಲಾಕೃತಿಗಳು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವಂತಿದೆ ಎಂದು ದೂರಿರುವ ಕೆಲವರು, ಕಲಾವಿದೆಯ ಮನೆಯ ಮೇಲೆ ಗುರುವಾರ ರಾತ್ರಿ ಕಲ್ಲು ತೂರಾಟ ನಡೆಸಿದ್ದಾರೆ. ಅವರ ಮನೆಯ ಕಿಟಕಿ ಗಾಜುಗಳನ್ನು ಒಡೆದಿದ್ದು, ಮನೆ ಮುಂದೆ ನಿಲ್ಲಿಸಿದ್ದ ಜೀಪ್‌ ಕೂಡ ಜಖಂಗೊಂಡಿದೆ.

ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ದುರ್ಗಾ ಮಾಲತಿ, ಚಿತ್ರಿಸಿರುವ ಚಿತ್ರಗಳು ಪುರುಷರ ಗುಪ್ತಾಂಗವನ್ನು ಬಿಂಬಿಸುತ್ತವೆ. ಒಂದು ಕಲಾಕೃತಿಯಲ್ಲಿ, ತ್ರಿಶೂಲವೊಂದರಲ್ಲಿ ಪುರುಷನ ಜನನಾಂಗವನ್ನು ಚಿತ್ರಿಸಲಾಗಿದೆ. ಮತ್ತೊಂದು ಕಲಾಕೃತಿಯಲ್ಲಿ ಪುರುಷನ ಗುಪ್ತಾಂಗದ ಮೇಲೆ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ಬಾಲಕಿ`ಯ ಚಿತ್ರ ಹಾಗೂ ಪ್ರತಿಭಟನೆಯ ಬಾವುಟವನ್ನು ಚಿತ್ರಿಸಲಾಗಿದೆ. ಇದನ್ನು ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದರು.

ADVERTISEMENT

ತಮ್ಮ ಮನೆ ಮೇಲೆ ನಡೆದಿರುವ ದಾಳಿ ಹಾಗೂ ಜೀಪುಗಳನ್ನು ಜಖಂಗೊಳಿಸಲಾದ ಚಿತ್ರಗಳನ್ನೂ ಈಗ ಅವರು ಫೇಸ್‌ಬುಕ್‌ ಪುಟದಲ್ಲಿ ಹಂಚಿಕೊಂಡಿದ್ದಾರೆ.

‘ನನ್ನ ವಿರುದ್ಧ ವಿವಿಧೆಡೆಗಳಿಂದ ಸಂಘ ಪರಿವಾರದವರು ಆನ್‌ಲೈನ್‌ ಪ್ರತಿಭಟನೆ ಶುರು ಮಾಡಿದ್ದಾರೆ. ನನ್ನ ವಿರುದ್ಧ ಕೆಟ್ಟ ಪದಗಳನ್ನು ಬಳಸಿ ಬೈಯುತ್ತಿದ್ದಾರೆ. ಆದರೆ ಇದ್ಯಾವುದೇ ಬೈಗುಳಗಳನ್ನು ನಾನು ಡಿಲೀಟ್‌ ಮಾಡುವುದಿಲ್ಲ. ಇದು ಕಮೆಂಟ್‌ ಮಾಡಿದವರ ಅಭಿರುಚಿಯನ್ನು ತೋರಿಸುತ್ತದೆ. ನಾನು ಯಾವ ತಪ್ಪೂ ಮಾಡಿಲ್ಲ ಎನ್ನುವುದು ನನಗೆ ತಿಳಿದಿದೆ. ಆದ್ದರಿಂದ ಈ ಬಗ್ಗೆ ನನಗೆ ಅಂಜಿಕೆ ಇಲ್ಲ’ ಎಂದು ದುರ್ಗಾ ಮಾಲತಿ ಹೇಳಿದ್ದಾರೆ.

ದಾಳಿಯ ಕುರಿತಾಗಿ ಪೊಲೀಸರಲ್ಲಿ ಅವರು ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.