ADVERTISEMENT

ಜನರಿಂದ ದೂರವಾದ ಬಿಜೆಪಿ; ಆರ್‌ಎಸ್‌ಎಸ್ ಟೀಕೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಉತ್ತರ ಪ್ರದೇಶದ ಬಿಜೆಪಿಯಲ್ಲಿ ಕಾರ್ಯಕರ್ತರಿಗಿಂತ ಅಧಿಕ ಸಂಖ್ಯೆಯಲ್ಲಿ ನಾಯಕರಿದ್ದಾರೆ. ಕಾಂಗ್ರೆಸ್ ಪಕ್ಷದಂತೆಯೇ ಬಿಜೆಪಿ ಕೂಡ ಅಲ್ಲಿ ಜನರಿಂದ ದೂರವಾಗಿದೆ ಎಂದು ಆರ್‌ಎಸ್‌ಎಸ್ ಟೀಕಿಸಿದೆ.

ರಾಜ್ಯದಲ್ಲಿ ಪಕ್ಷದ ಸ್ಥಿತಿ ಹೀಗೆಯೇ ಮುಂದುವರಿದರೆ 2014ರ ಸಾರ್ವತ್ರಿಕ ಚುನಾವಣೆಯಲ್ಲೂ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿಯಲಾಗದು. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದ ಚುನಾವಣೆ ಬಿಜೆಪಿ ಪಾಲಿಗೆ `ಬೆಂಕಿಯ ಹಾದಿ~ಯಾಗಲಿದೆ ಎಂದು ಆರ್‌ಎಸ್‌ಎಸ್ ತನ್ನ ಮುಖವಾಣಿಗಳಾದ `ಪಾಂಚಜನ್ಯ~ ಹಾಗೂ `ದಿ ಆರ್ಗನೈಸರ್~ ಸಂಪಾದಕೀಯಗಳಲ್ಲಿ ಅಭಿಪ್ರಾಯಪಟ್ಟಿದೆ.

ಮತದಾರರನ್ನು ಸೆಳೆಯಲು ಪ್ರಮುಖ ವಿಷಯಗಳ ಕುರಿತು ಸ್ಪಷ್ಟ ಸೈದ್ಧಾಂತಿಕ ನಿಲುವುಗಳು, ತತ್ವನಿಷ್ಠ ಧೋರಣೆ ಹಾಗೂ ನಾಯಕತ್ವದ ಬಗ್ಗೆ ವಿಶ್ವಾಸಾರ್ಹತೆ ಅತ್ಯಗತ್ಯ. ಪಕ್ಷಕ್ಕಿಂತ ಮುಖ್ಯವಾಗಿ ನಾಯಕ, ಅದಕ್ಕಿಂತ ಮಿಗಿಲಾಗಿ ನಾಯಕನ ಕಾರ್ಯನಿರ್ವಹಣಾ ವಿಧಾನಗಳು ಇತ್ತೀಚಿನ ದಿನಗಳಲ್ಲಿ ಚುನಾವಣಾ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ ಎಂದು `ದಿ ಆರ್ಗನೈಸರ್~ ಸಂಪಾದಕೀಯ ಹೇಳಿದೆ.

ರಾಜ್ಯದಲ್ಲಿ ಪಕ್ಷದ ಸಾಧನೆ 2007ರ ಚುನಾವಣೆಗಿಂತ ಕಳಪೆಯಾಗಿದೆ. ಇದರಿಂದ ಪಕ್ಷದ ಮುಂದೆ ಹಲವು ಪ್ರಶ್ನೆಗಳು ಉದ್ಭವವಾಗಿದ್ದು, ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.