ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಬಗ್ಗೆ ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದು ಅಪೊಲೋ ಆಸ್ಪತ್ರೆಯ ಕಾರ್ಯನಿರ್ವಾಹಕ ಮುಖ್ಯಸ್ಥ ಡಾ.ಪ್ರತಾಪ್ ರೆಡ್ಡಿ ಹೇಳಿದ್ದಾರೆ.
‘ನಾವು ತನಿಖೆ ಎದುರಿಸಲು ಸಿದ್ಧರಿದ್ದೇವೆ. ಜಯಲಲಿತಾ ಅವರಿಗೆ ನೀಡಿದ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ. ಇದಕ್ಕಾಗಿ ಯಾರು ಮಧ್ಯಸ್ಥಿಕೆ ವಹಿಸುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.
‘ಅಪೊಲೋ ಆಸ್ಪತ್ರೆಯ ವೈದ್ಯರು ಜಯಲಲಿತಾ ಅವರ ಆರೋಗ್ಯದಲ್ಲಿ ಸುಧಾರಣೆಯಾಗುವವರೆಗೂ ವಿಶೇಷ ನಿಗಾವಹಿಸಿ ಆರೈಕೆ ಮಾಡಿದ್ದರು. ಆದರೆ ದುರಾದೃಷ್ಟವಶಾತ್ ಅವರಿಗೆ ಹೃದಯಾಘಾತವಾಯಿತು. ನಂತರ ಅವರು ವೈದ್ಯರ ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪಿದರು’ ಎಂದು ಪ್ರತಾಪ್ ಸ್ಪಷ್ಟನೆ ನೀಡಿದ್ದಾರೆ.
ಜಯಲಲಿತಾ ಅವರ ಚಿಕಿತ್ಸೆಗಾಗಿ ಸಿಂಗಪುರದ ತಜ್ಞ ವೈದ್ಯರ ತಂಡವನ್ನೇ ಕರೆಸಲಾಗಿತ್ತು. ಇಬ್ಬರು ಜೊತೆಗೂಡಿಯೇ ಅವರಿಗೆ ಚಿಕಿತ್ಸೆ ನೀಡಿದ್ದೆವು. ನಾವು ಚಿಕಿತ್ಸೆ ನೀಡುವ ವಿಚಾರದಲ್ಲಿ ಯಾವುದೇ ಪ್ರಮಾದ ಎಸಗಿಲ್ಲ. ಹಾಗಾಗಿ ನಾವು ತನಿಖೆ ಎದುರಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.