ADVERTISEMENT

ಜಾಟ್ ಚಳವಳಿ: ರೈಲು ಸೇವೆ ಅಸ್ತವ್ಯಸ್ತ, ಸುಪ್ರೀಂ ಮಧ್ಯಪ್ರವೇಶ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 9:25 IST
Last Updated 24 ಮಾರ್ಚ್ 2011, 9:25 IST
ಜಾಟ್ ಚಳವಳಿ: ರೈಲು ಸೇವೆ ಅಸ್ತವ್ಯಸ್ತ, ಸುಪ್ರೀಂ ಮಧ್ಯಪ್ರವೇಶ
ಜಾಟ್ ಚಳವಳಿ: ರೈಲು ಸೇವೆ ಅಸ್ತವ್ಯಸ್ತ, ಸುಪ್ರೀಂ ಮಧ್ಯಪ್ರವೇಶ   

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿಗೆ ಆಗ್ರಹಿಸಿ ಜಾಟರು ನಡೆಸುತ್ತಿರುವ ಚಳವಳಿಯ ಪರಿಣಾಮವಾಗಿ ರಾಜಧಾನಿ ದೆಹಲಿಗೆ ನೀರು ಸೇರಿದಂತೆ ಅಗತ್ಯ ವಸ್ತುಗಳ ಸರಬರಾಜು ವ್ಯತ್ಯಯ ಅಗದಂತೆ ನೋಡಿಕೊಳ್ಳಿ ಎಂದ ಸುಪ್ರೀಂ ಕೋರ್ಟ್ ಗುರುವಾರ ದೆಹಲಿಯ ಮೂರು ನೆರೆ ರಾಜ್ಯಗಳಿಗೆ ಸೂಚಿಸಿತು. ಚಳವಳಿಯಿಂದಾಗಿ ಉತ್ತರಭಾರತದ ಹಲವಡೆ ರೈಲು ಸೇವೆ ಅಸ್ತವ್ಯಸ್ತಗೊಂಡಿದೆ.

 ಮಥುರಾ ಮತ್ತು ಪಾಣಿಪತ್ ತೈಲ ಸಂಸ್ಕರಣಾಗಾರಗಳಿಂದ ದೆಹಲಿಗೆ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜಿಗೆ ಯಾವುದೇ ರೀತಿಯಲ್ಲೂ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಮತ್ತು ದಲ್ವೀರ್ ಭಂಡಾರಿ ಅವರನ್ನು ಒಳಗೊಂಡ ಪೀಠವು ಹರ್ಯಾಣ, ಉತ್ತರಪ್ರದೇಶ ಮತ್ತು ರಾಜಸ್ತಾನ ಸರ್ಕಾರಗಳಿಗೆ ನಿರ್ದಿಷ್ಟ ಸೂಚನೆ ನೀಡಿತು.

ಜಲ ಮಂಡಳಿ ಮತ್ತು ಭಾರತೀಯ ತೈಲ ನಿಗಮ ಸಲ್ಲಿಸಿದ್ದ ತುರ್ತು ಅರ್ಜಿಗಳ ವಿಚಾರಣೆಯನ್ನು ವಿಶೇಷವಾಗಿ ಕೈಗೆತ್ತಿಕೊಂಡು ನಡೆಸಿದ ಪೀಠವು ಈ ನಿಟ್ಟಿನ ನಿರ್ದೇಶನಗಳನ್ನು ನೀಡಿತು. ಹೋಳಿ ಹಬ್ಬದ ಹಿನ್ನೆಲೆಯಲ್ಲಿ ರಜಾ ಇದ್ದುದರಿಂದ ಈ ಪ್ರಕರಣಗಳ ವಿಚಾರಣೆಗಾಗಿಯೇ ನ್ಯಾಯಾಲಯದ ವಿಶೇಷ ಕಲಾಪ ನಡೆಯಿತು.

ಸಾರ್ವಜನಿಕ ಸಾರಿಗೆ ಸವಲತ್ತುಗಳಿಗೂ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದೂ ಪೀಠ ರಾಜ್ಯಗಳಿಗೆ ನಿರ್ದೇಶನ ನೀಡಿತು.

ಈ ಮಧ್ಯೆ ಜಾಟರು ತಮ್ಮ ಚಳವಳಿ ಮುಂದುವರಿಸಿದ ಪರಿಣಾಮವಾಗಿ ಉತ್ತರ ಭಾರತದಾದ್ಯಂತ ರೈಲು ಸೇವೆ ಅಸ್ತವ್ಯಸ್ತಗೊಂಡಿತು. ಹಲವಾರು ರೈಲುಗಾಡಿಗಳ ಸಂಚಾರ ರದ್ದಾದರೆ, ಕೆಲವು ರೈಲುಗಳ ಪಯಣ ಅರ್ಧಕ್ಕೆ ಸ್ಥಗಿತಗೊಂಡಿತು.

ತಮ್ಮ ಬೇಡಿಕೆ ಈಡೇರುವವರೆಗೂ ಚಳವಳಿ ಹಿಂತೆಗೆದುಕೊಳ್ಳುವುದಿಲ್ಲ ಚಳವಳಿಯ ಮುಂದಾಳುಗಳು ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.