ನವದೆಹಲಿ (ಪಿಟಿಐ): ಮಾಜಿ ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಹರಿಯಾಣದ ಮಾಜಿ ಸಚಿವ ಗೋಪಾಲ್ ಗೋಯಲ್ ಕಾಂಡಾ ಅವರಿಗೆ ನಿರೀಕ್ಷಣಾ ಜಾಮೀನು ನೀಡುವ ಸಂಬಂಧದ ಆದೇಶವನ್ನು ದೆಹಲಿ ಹೈಕೋರ್ಟ್ ಮಂಗಳವಾರ ಕಾದಿರಿಸಿದೆ.
`ಗೀತಿಕಾ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ (ಕಾಂಡಾ) ಮತ್ತು ಆತನ ಉದ್ಯೋಗಿ ಅರುಣಾ ಛಡ್ಡಾ ಅವರ ಒಳಸಂಚಿನ ಬಗ್ಗೆ ವಿಚಾರಣೆ ನಡೆಸಲು ಬಂಧನ ಅಗತ್ಯವಾಗಿದ್ದು, ಜಾಮೀನು ನೀಡಬಾರದು~ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಸಿದ್ದಾರ್ಥ ಲಥರಾ ಅವರು ನ್ಯಾಯಮೂರ್ತಿ ಪಿ.ಕೆ. ಭಾಸಿನ್ ಅವರಿಗೆ ಮನವಿ ಸಲ್ಲಿಸಿದರು.
ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಪ್ರಕರಣ: ಮಾಜಿ ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣ ಮಂಗಳವಾರ ಲೋಕಸಭೆಯಲ್ಲಿ ಪ್ರತಿಧ್ವನಿಸಿತು.
ಈ ದುರಂತಕ್ಕೆ ಕಾರಣ ಎನ್ನಲಾದ ಹರಿಯಾಣದ ಮಾಜಿ ಸಚಿವರನ್ನು ತಕ್ಷಣವೇ ಬಂಧಿಸುವಂತೆ ಬಿಜೆಪಿ ಸದಸ್ಯರು ಒತ್ತಾಯಿಸಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ವೀರೇಂದ್ರ ಕಶ್ಯಪ್ ಅವರು, ಆತ್ಯಹತ್ಯೆ ಮಾಡಿ ಕೊಂಡ ಮಹಿಳೆಯ ಕುಟುಂಬಕ್ಕೆ ಕೇಂದ್ರ ಸರ್ಕಾರ ಸೂಕ್ತ ನ್ಯಾಯ ಒದಗಿಸಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.